ಹ್ಯಾಂಗ್ಜೂ: ಚೀನಾದ ಹ್ಯಾಂಗ್ಜೂನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತೆರಳಬೇಕಿದ್ದ ಅರುಣಾಚಲ ಪ್ರದೇಶದ ಮೂವರು ಕ್ರೀಡಾಪಟುಗಳಿಗೆ ಚೀನಾ ಪ್ರವೇಶ ನಿರಾಕರಿಸಿದೆ.
10 ಆಟಗಾರರನ್ನೊಳಗೊಂಡ ತಂಡದಲ್ಲಿ ಮೂವರು ಮಹಿಳಾ ಆಟಗಾರರಿಗೆ ಪ್ರವೇಶ ನಿರಾಕರಿಸಿದ್ದು, ಉಳಿದವರು ಹ್ಯಾಂಗ್ಜೂಗೆ ತೆರಳಿದ್ದಾರೆ. ವೂಶೂ ಕ್ರೀಡಾಪಟುಗಳಾದ ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಾಮ್ಗು ಅವರ ಪ್ರವೇಶ ನಿರಾಕರಿಸಿದೆ. ಚೀನಾ ಅರುಣಾಚಲ ಪ್ರದೇಶದ ಕ್ರೀಡಾಪಟುಗಳಿಗೆ ಪ್ರವೇಶ ನಿರಾಕರಿಸಿದ ಬೆನ್ನಲ್ಲೇ ಮಾಹಿತಿ ಮತ್ತು ಪ್ರಸಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಮ್ಮ ನಿಗದಿತ ಚೀನಾ ಪ್ರವಾಸವನ್ನ ರದ್ದುಗೊಳಿಸಿದ್ದಾರೆ. ಇದು ಪ್ರತಿಭಟನೆಯ ಸಂಕೇತವೆಂದೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಾಮ್ಗು ಪ್ರವೇಶ ವೀಸಾವಾಗಿ ಕಾರ್ಯನಿರ್ವಹಿಸುವ ಹ್ಯಾಂಗ್ಜೂ ಏಷ್ಯನ್ ಗೇಮ್ಸ್ ಆರ್ಗನೈಸಿಂಗ್ ಕಮಿಟಿಯಿಂದ ತಮ್ಮ ಮಾನ್ಯತೆ ಕಾರ್ಡ್ಗಳನ್ನು ಪಡೆದಿದ್ದರು. ಈ ಮಾನ್ಯತಾ ಪತ್ರವನ್ನ ಪ್ರವೇಶ ವೀಸಾ ಎಂದು ಪರಿಗಣಿಸಲಾಗುತ್ತದೆ. ಅಥ್ಲೀಟ್ಗಳು ತಮ್ಮ ಪ್ರಯಾಣ ದಾಖಲೆಯನ್ನ ಡೌನ್ಲೋಡ್ ಮಾಡಿಕೊಳ್ಳಬೇಕಿತ್ತು. ಏಕೆಂದರೆ ಇದು ಆಟಗಾರರು ಆಗಮಿಸುವ ವೇಳೆ ದೃಢೀಕರಿಸಲಾಗುತ್ತದೆ. ಆದ್ರೆ ಬುಧವಾರ ಏಷ್ಯನ್ ಗೇಮ್ಸ್ಗೆ ತೆರಳಬೇಕಿದ್ದಾಗ ಅರುಣಾಚಲ ಪ್ರದೇಶದ ಮೂವರು ಆಟಗಾರರು ತಮ್ಮ ಪ್ರಯಾಣದ ದಾಖಲೆಗಳನ್ನ ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಮೂವರಿಗೆ ಪ್ರವೇಶ ನಿಷೇಧ ಮಾಡಲಾಗಿದೆ ಎಂದು ತಿಳಿದುಬಂದಿದೆ. 10 ಆಟಗಾರರನ್ನೊಳಗೊಂಡ ತಂಡದಲ್ಲಿ ಉಳಿದ ಯಾವುದೇ ಆಟಗಾರರು ಮತ್ತು ಸಿಬ್ಬಂದಿಗೆ ಈ ಸಮಸ್ಯೆ ಎದುರಾಗಿಲ್ಲ.
ಚೀನಾದ ಹಾಂಗ್ಜೂನಲ್ಲಿ ನಡೆಯುತ್ತಿರಯುವ 19ನೇ ಏಷ್ಯನ್ ಗೇಮ್ಸ್ಗೆ ಅರುಣಾಚಲ ಪ್ರದೇಶದ ಕೆಲವು ಭಾರತೀಯ ಕ್ರೀಡಾಪಟುಗಳಿಗೆ ಮಾನ್ಯತೆ ಮತ್ತು ಪ್ರವೇಶ ನಿರಾಕರಿಸುವ ಮೂಲಕ ಚೀನಾದ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ ಎಂದು ಭಾರತ ಸರ್ಕಾರ ತಿಳಿದುಕೊಂಡಿದೆ. ವಾಸಸ್ಥಳ, ಜನಾಂಗೀಯತೆಯ ಆಧಾರದ ಮೇಲೆ ನಾಗರಿಕರನ್ನು ಭೇದ-ಭಾವದಿಂದ ನೋಡುವುದನ್ನ ದೃಢವಾಗಿ ತಿರಸ್ಕರಿಸುತ್ತದೆ. ಈ ಕುರಿತು ನವದೆಹಲಿ ಮತ್ತು ಬೀಜಿಂಗ್ನಲ್ಲೂ ಪ್ರತಿಭಟನೆ ದಾಖಲಿಸಲಾಗಿದೆ.
ಚೀನಾ ನಮ್ಮ ಕ್ರೀಡಾಪಟುಗಳಿಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದೆ. ಚೀನಾದ ಈ ನಡೆಯು ಏಷ್ಯನ್ ಗೇಮ್ಸ್ನ ಉತ್ಸಾಹ ಹಾಗೂ ನಿಯಮವನ್ನೂ ಉಲ್ಲಂಘಿಸುತ್ತದೆ ಎಂದು ಭಾರತ ಅಸಮಾಧಾನ ಹೊರಹಾಕಿದೆ. ಅಲ್ಲದೇ ಮಾಹಿತಿ ಮತ್ತು ಪ್ರಸಾರ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಚೀನಾಕ್ಕೆ ತಮ್ಮ ನಿಗದಿತ ಭೇಟಿಯನ್ನ ರದ್ದುಗೊಳಿಸಿದ್ದಾರೆ. ಜೊತೆಗೆ ನಮ್ಮ ಹಿತಾಸಕ್ತಿಯನ್ನ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳುವು ಹಕ್ಕನ್ನು ಭಾರತ ಸರ್ಕಾರ ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.