ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ ವಿದ್ಯಾದಾಯಿನಿ ಯುವಕ ಯುವತಿ ವೃಂದ, ಮಟ್ಟು ಪಟ್ಣ, ಹೆಜಮಾಡಿ ಆಯೋಜಿಸಿದ ಹಿಂದೂ ರಾಷ್ಟ್ರ ಜಾಗೃತಿ ಸಭೆಯು ದಿನಾಂಕ ೦೭.೦೧.೨೦೨೪ ರಂದು ಸಂಜೆ ೪ ಗಂಟೆಗೆ ಹೆಜಮಾಡಿ ಬಿಲ್ಲವರ ಸಂಘ (ರಿ.) ಹೆಜಮಾಡಿ ಜಯ ಸಿ. ಸುವರ್ಣ ಸಭಾಗೃಹದಲ್ಲಿ ಜರುಗಿತು.
ಈ ಸಭೆಗೆ ಮಟ್ಟು ಮೊಗವೀರ ಮಹಾಸಭೆಯ ಅಧ್ಯಕ್ಷರಾದ ಶ್ರೀ. ರಘುವೀರ ಎಲ್. ಸುವರ್ಣ, ವಿದ್ಯಾದಾಯಿನಿ ಯುವಕ ಯುವತಿ ವೃಂದದ ಅಧ್ಯಕ್ಷರಾದ ಶ್ರೀ. ಭರತೇಶ್ ಡಿ.ಹೆಜಮಾಡಿ, ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕರ್ನಾಟಕದ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ, ಮತ್ತು ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ ಚಂದ್ರ ಮೊಗೇರ ಇವರು ಮಾತನಾಡುತ್ತಾ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರದಲ್ಲಿ ರಾಮಲಲ್ಲಾ ವಿರಾಜಮಾನರಾಗುತ್ತಿದ್ದಾರೆ. ಈ ಪವಿತ್ರ ಭೂಮಿಯು ಪ್ರಭು ಶ್ರೀರಾಮರ ‘ರಾಮರಾಜ್ಯ’ವನ್ನು ನೋಡಿತು,ಪಾಂಡವರ ‘ಧರ್ಮರಾಜ್ಯ’ವನ್ನು ನೋಡಿತು, ಚಂದ್ರಗುಪ್ತ ಮೌರ್ಯನ ವಿಶಾಲವಾದ ‘ಮೌರ್ಯಶಾಸನ’ವನ್ನು ನೋಡಿತು, ರಾಜಾಕೃಷ್ಣದೇವರಾಯರ ‘ವಿಜಯನಗರ ಸಾಮ್ರಾಜ್ಯ’ವನ್ನು ನೋಡಿತು, ಅದೇ ರೀತಿ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ‘ಹಿಂದವೀ ಸ್ವರಾಜ್ಯ’ವನ್ನು ಅನುಭವಿಸಿದೆ. ಇಂದು ಅದೇ ಭೂಮಿಯಲ್ಲಿ ಪುನಃ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಧ್ವನಿಯನ್ನು ಮೊಳಗಿಸಲು ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು. ಈಗ ಹಿಂದೂಗಳಿಗೆ ಒಂದೇ ಮಿಶನ್ ಹಿಂದೂ ರಾಷ್ಟ್ರದ ಸ್ಥಾಪನೆ ಎಂದು ಘೋಷಿಸಿದರು.
ಸನಾತನ ಸಂಸ್ಥೆಯ ವಕ್ತಾರರಾದ ಸೌ. ಲಕ್ಷ್ಮೀ ಪೈ ಇವರು ಮಾತನಾಡುತ್ತಾ ಹಿಂದೂ ರಾಷ್ಟ್ರದ ಅವಶ್ಯಕತೆ, ಸನಾತನ ಹಿಂದೂ ಧರ್ಮದ ಮಹಾನತೆ ಧರ್ಮ ಶಿಕ್ಷಣದ ಅವಶ್ಯಕತೆ , ಸರ್ವಧರ್ಮ ಸಮಭಾವದ ಹೆಸರಿನಲ್ಲಿ ಹಿಂದುಗಳಿಗೆ ಆಗುವ ಅನ್ಯಾಯ, ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಮಾಡಲು ಮಾನಸಿಕ, ಭೌತಿಕ, ಶಾರೀರಿಕ ಸ್ಥರದಲ್ಲಿ ಮಾಡುವುದಕ್ಕಿಂತ, ಆಧ್ಯಾತ್ಮಿಕ ಬಲ, ಭಗವಂತನ ಉಪಾಸನೆ, ಸಾಧನೆಯ ಅಧಿಷ್ಠಾನ ಅತೀ ಮುಖ್ಯವಾಗಿದೆ ಎಂದು ಮಂಡಿಸಿದರು. ಧರ್ಮಾಚರಣೆಯ ಕೃತಿಗಳನ್ನು ಮಾಡುವುದರಿಂದ ಯಾವ ರೀತಿ ಧರ್ಮ ರಕ್ಷಣೆಯಾಗುವುದು,ಕುಂಕುಮದಾರಣೆಯ ಮಹತ್ವ , ಶೇಕ್ ಹ್ಯಾಂಡ್ ಮಾಡುವ ಬದಲು ನಮಸ್ಕಾರ ಕೃತಿಯನ್ನು ಮಾಡುವ ಪದ್ಧತಿ, ದೇವಸ್ಥಾನ ಪ್ರವೇಶ ಮಾಡುವಾಗ ವಸ್ತ್ರ ಸಂಹಿತೆ ನಿಯಮದ ಪಾಲನೆ, ಭಗವಂತನ ಉಪಾಸನೆಯಿಂದ ಹೇಗೆ ನಾವು ಚೈತನ್ಯ, ಜ್ಞಾನ, ಹಾಗೂ ನೈತಿಕ ಸಂವರ್ಧನೆಯನ್ನು ಪಡೆಯಬಹುದು ಎಂದು ಮಾಹಿತಿಯನ್ನು ನೀಡಿದರು.
ಶ್ರೀ ವಿಜಯಕುಮಾರ್ ಸಮನ್ವಯಕರು,ಹಿಂದೂ ಜನಜಾಗೃತಿ ಸಮಿತಿ.