ಕಾರವಾರ: ಅನ್ಯ ಕೋಮಿನ ಯುವಕರಿಂದ ಶಿವ ದೇವಾಲಯದ ಅವಶೇಷಗಳನ್ನು ಕಲ್ಲಿನಿಂದ ಪುಡಿಮಾಡಿ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿ ಕ್ರೌರ್ಯ ಮೆರೆದ ಘಟನೆ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದ ನಾಗೋಡಾ ಕ್ರಾಸ್ ಬಳಿ ನಡೆದಿದೆ.
ಜೋಯಿಡಾ ತಾಲೂಕಿನ ರಾಮನಗರದಲ್ಲಿ ಕಾಳಿನದಿಗೆ ಕಟ್ಟಲಾದ ಸೂಪಾ ಜಲಾಶಯದಲ್ಲಿ ನೀರು ಕಡಿಮೆಯಾದಾಗ ನೀರಿನಲ್ಲಿ ಮುಳಗಿ ಹೋಗಿದ್ದ ಶಿವ ದೇವಾಲಯದ ಅವಶೇಷಗಳು ಕಾಣಸಿಗುತ್ತವೆ. ಇವುಗಳನ್ನು ನೋಡಲು ಸೆ.18 ರಂದು ತೆರಳಿದ್ದ ಆರುಜನ ಅನ್ಯಕೋಮಿನ ಯುವಕರು ಶಿವ ದೇವಾಲಯದ ಅವಶೇಷಗಳನ್ನು ಕಲ್ಲಿನಿಂದ ಒಡೆದು ಹಾಕಿದ್ದರು. ಈ ವೀಡಿಯೋವನ್ನು ಹುಸೈನ್ ಶೇಖ್ ಎಂಬಾತ ಚಿತ್ರೀಕರಣ ನಡೆಸಿ ಫೇಸ್ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿ ವಿಕೃತಿ ಮೆರೆದಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಿಂದೂಗಳ ಭಾವನೆಗೆ ಘಾಸಿ ಗೊಳಿಸಿರುವ ಹಾಗೂ ಪುರಾತನ ದೇವರ ವಿಗ್ರಹವನ್ನು ನಾಶಪಡಿಸಿರುವ ಈ ಯುವಕರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ರಾಮನಗರ ಠಾಣೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ಗಿರೀಶ್ ಗೋಸಾಯಿ ಎಂಬವರು ದೂರು ದಾಖಲಿಸಿದ್ದಾರೆ.