ಬೆಂಗಳೂರು: ಬೈಂದೂರು ವಿಧಾನಸಭೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುತ್ತೇನೆಂದು ಚೈತ್ರಾ ಕುಂದಾಪುರ ಉಂಡೆ ನಾಮ ಎಳೆದಿದ್ದಾಳೆ. ಗಗನ್ ಕಡೂರು, ಮೋಹನ್ ಕುಮಾರ್ ಅಲಿಯಾಸ್ ರಮೇಶ್ ಮತ್ತು ಗ್ಯಾಂಗ್ ಜತೆ ಸೇರಿಕೊಂಡು ಉದ್ಯಮಿ ಬಳಿಯಿಂದ ಬರೋಬ್ಬರಿ 7 ಕೋಟಿ ಪೀಕಿದ್ದಾಳೆ. ಪ್ರಕರಣದ ಬಗ್ಗೆ ಇಂಚಿಂಚೂ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಸಿಸಿಬಿ ಪೊಲೀಸರು ಅಲರ್ಟ್ ಆಗಿ ಎಲ್ಲರನ್ನೂ ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಇದರ ಮಧ್ಯೆ ಚೈತ್ರಾ ಕುಂದಾಪುರ ಸ್ವಾಮೀಜಿ ಬಂಧನವಾಗಲಿ ಆಗ ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತದೆ ಎಂದು ಸ್ಫೋಟಕ ಅಂಶವನ್ನು ಬಿಚ್ಚಿಟ್ಟಿದ್ದಾರೆ.
ಸಿಸಿಬಿ ಕಚೇರಿ ಮುಂದೆ ಪೊಲೀಸ್ ವಾಹನದಿಂದ ಕೆಳಗಡೆ ಇಳಿಯುತ್ತಿದ್ದಂತೆ ಮಾಧ್ಯಮಗಳ ಕ್ಯಾಮೆರಾ ಮುಂದೆ ಮಾತನಾಡಿದ ಚೈತ್ರಾ, ಸ್ವಾಮೀಜಿ ಬಂಧನವಾಗಲಿ ಆಗ ಎಲ್ಲ ಸತ್ಯ ಹೊರಗಡೆ ಬರುತ್ತದೆ. ಇದರಲ್ಲಿ ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತದೆ. ಇಂದಿರಾ ಕ್ಯಾಂಟೀನ್ ಬಿಲ್ಗಾಗಿ ಈ ರೀತಿ ಷಡ್ಯಂತ್ರ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಚೈತ್ರಾಳ ಈ ಹೇಳಿಕೆ ಇದೀಗ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಅಭಿನವ ಹಾಲಶ್ರೀ ವಿಚಾರ ಪ್ತಸ್ತಾಪಿಸಿದ್ದೇಕೆ ಚೈತ್ರಾ ಕುಂದಾಪುರ? ಅವರು ಅರೆಸ್ಟ್ ಆಗಲಿ ಸತ್ಯ ಹೊರ ಬರುತ್ತೆ ಅಂದಿದ್ದೇಕೆ? ಸ್ವಾಮೀಜಿ ನೇತೃತ್ವದಲ್ಲಿ ನಡೆದಿರುವುದಾದರೂ ಏನು? ಮೂವರ ನಡುವೆ ನಡೆದ ಮಾತುಕತೆ ಆದರು ಏನು? ಈ ಪ್ರಕರಣದಲ್ಲಿ ದೊಡ್ಡವರು ಸಹ ಶಾಮೀಲು ಆಗಿದ್ದಾರಾ? ಸ್ವಾಮೀಜಿ ಬಂಧನದ ಬಳಿಕ ಎಲ್ಲವೂ ಗೊತ್ತಾಗಲಿದೆಯಾ? ಎಂಬ ಪ್ರಶ್ನೆ ಉದ್ಭವಿಸಿವೆ.
ಹೊಸಪೇಟೆ ಜಿಲ್ಲೆಯ ಹಿರೇ ಹಡಗಲಿಯ ಹಾಲುಸ್ವಾಮಿ ಮಠದ ಅಭಿನವ ಶ್ರೀ ಹಾಲುಶ್ರೀ ಸ್ವಾಮೀಜಿ ಕೂಡ ಈ ಪ್ರಕರಣದಲ್ಲಿ ಇದ್ದು, ಎ3 ಆರೋಪಿಯಾಗಿದ್ದಾರೆ. ಆದ್ರೆ, ಚೈತ್ರಾ ಕುಂದಾಪುರ ಅರೆಸ್ಟ್ ಆಗುತ್ತಿದ್ದಂತೆಯೇ ಸ್ವಾಮೀಜಿ ನಾಪತ್ತೆಯಾಗಿದ್ದಾರೆ. ಮಠಕ್ಕೆ ಬರದೇ ಫೋನ್ ಸಂಪರ್ಕಕ್ಕೆ ಸಿಗದೇ ಗಯಾಬ್ ಆಗಿದ್ದಾರೆ. ಹೀಗಾಗಿ ಸಿಸಿಬಿ ಪೊಲೀಸರು ಸಹ ಸ್ವಾಮೀಜಿ ಬಂಧನಕ್ಕೆ ಬಲೆ ಬೀಸಿದ್ದು, ಅವರು ಸಿಕ್ಕ ಬಳಿಕ ಈ ಪ್ರಕರಣ ಮತ್ತಷ್ಟು ಸ್ಫೋಟಕ ಅಂಶಗಳು ಬಯಲಾಗಲಿವೆ.