ಹುಬ್ಬಳ್ಳಿ, ಸೆ.28: ಶಿವಾಜಿ ವೃತ್ತದ ಬಳಿ ಮರಾಠಗಲ್ಲಿ ಸಾರ್ವಜನಿಕ ಬೃಹತ್ ಗಣೇಶೋತ್ಸವ ಭಾರೀ ಸಂಭ್ರಮದಿಂದ ನಡೆಯಿತು. ಆದರೆ, ಪಟಾಟಿ ಸಿಡಿಸುವ ವೇಳೆ ಕಿಡಿ ತಗುಲಿ 25 ಅಡಿ ಎತ್ತರದ ಗಣೇಶ ಮೂರ್ತಿಗೆ ತಗುಲಿದ ಘಟನೆ ಕೂಡ ನಡೆಯಿತು. ಕೂಡಲೇ ಎಚ್ಚೆತ್ತ ಸಮಿತಿ ಸದಸ್ಯರು ಬೆಂಕಿಯನ್ನು ನಂದಿಸಿದ್ದು, ಅದೃಷ್ಟವಶಾತ್ ದೊಡ್ಡ ದುರಂತ ತಪ್ಪಿದೆ.
25 ಅಡಿ ಎತ್ತರದ ಗಣೇಶನನ್ನು ನೋಡಲು ಭಕ್ತ ಸಾಗರವೇ ಹರಿದುಬಂದಿತ್ತು. ಮೆರವಣಿಗೆ ಉದ್ದಕ್ಕೂ ಸಾವಿರಾರು ಜನರು ಸಾಗಿದರು. ಯುವಕರ ತಂಡ ಪಟಾಕಿ ಹಚ್ಚಿ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಆದರೆ, ಪಟಾಕಿ ಹಚ್ಚುವಾಗ ಬೆಂಕಿಯ ಕಿಡಿ ಗಣಪತಿಗೆ ಹೊದಿಸಿದ್ದ ರೇಷ್ಮೆ ಬಟ್ಟೆಗೆ ತಗುಲಿ ಬೆಂಕಿ ಹತ್ತಿಕೊಂಡಿದೆ.
ಇದನ್ನು ಗಮನಿಸಿದ ಸಮಿತಿ ಸದಸ್ಯರು ಕೂಡಲೇ ನೀರು ಹಾಕಿ ಬೆಂಕಿಯನ್ನು ನಂದಿಸಿ ಅನಾಹುತವನ್ನು ತಪ್ಪಿಸಿದರು. ಬಳಿಕ ರೇಷ್ಮೆ ಬಟ್ಟೆ ಬದಲು ಬಿಳಿಬಟ್ಟೆ ತೊಡಿಸಿ ಮೂರ್ತಿಯನ್ನು ಮೆರವಣಿಗೆ ನಡೆಸಿ ವಿಸರ್ಜನೆ ಮಾಡಲಾಯಿತು. ಘಟನೆಯಿಂದಾಗಿ ಕೆಲಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.