ಬೆಂಗಳೂರು ಜೊತೆಗೆ ರಾಮನಗರವೂ ಬಂದ್- ಹೆಚ್ಚಾದ ಕಾವೇರಿ ಕಿಚ್ಚು

0
94

ರಾಮನಗರ, ಸೆ.24: ಕರ್ನಾಟಕದಲ್ಲಿ ಕಾವೇರಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ತಿದ್ದು, ರಾಜ್ಯದ ರಾಜ್ಯಧಾನಿ ಬೆಂಗಳೂರು ಬಂದ್ ಜೊತೆಗೆ ರಾಮನಗರ ಬಂದ್ ಮಾಡಲು ವಿವಿಧ ಕನ್ನಡಪರ ಹಾಗೂ ರೈತ ಸಂಘಟನೆಗಳು ಕರೆಕೊಟ್ಟಿವೆ.ಇದೆ ಸೆ.26ಕ್ಕೆ ರಾಮನಗರ ಸ್ತಬ್ಧ ಮಾಡುವ ಮೂಲಕ ಸರ್ಕಾರಗಳಿಗೆ ಬಿಸಿ ಮುಟ್ಟಿಸಲು ಹಲವು ಸಂಘಟನೆಗಳು ಮುಂದಾಗಿವೆ.

ರೇಷ್ಮೆನಗರಿ ರಾಮನಗರದಲ್ಲೂ ಕಾವೇರಿ ಕಿಚ್ಚು ಹೆಚ್ಚಾಗಿದೆ. ರಾಮನಗರದ ರೈತ ಹಾಗೂ ಕನ್ನಡಪರ ಸಂಘಟನೆಗಳಿಂದ ಬಂದ್ ಕರೆ ನೀಡಲಾಗಿದ್ದು ಇಂದು ರಾಮನಗರದ ರೈತ ಭವನದಲ್ಲಿ ಪೂರ್ವಭಾವಿ ಸಭೆ ನಡೆಸಿ ಬಂದ್‌ನ ರೂಪುರೇಷೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಬಿಡದಿ ಪಟ್ಟಣಗಳನ್ನ ಸಂಪೂರ್ಣ ಸ್ತಬ್ಧ ಮಾಡಲು ಹಲವು ಸಂಘಟನೆಗಳು ನಿರ್ಧರಿಸಿವೆ.

ಇನ್ನೂ ರಾಮನಗರ ಬಂದ್‌ಗೆ ವರ್ತಕರ ಸಂಘ, ಹೋಟೆಲ್ ಮಾಲೀಕರ ಸಂಘ, ವಕೀಲರ ಸಂಘ, ಆಟೋ ಚಾಲಕರ ಸಂಘ, ಖಾಸಗಿ ಬಸ್ ಮಾಲೀಕರ ಸಂಘ ಸೇರಿ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಸೆ.26 ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ಮೆಡಿಕಲ್, ಆಸ್ಪತ್ರೆ, ಹಾಲಿನ ಅಂಗಡಿ, ರೇಷ್ಮೆ ಮಾರುಕಟ್ಟೆ ಹೊರತು ಪಡಿಸಿ ಉಳಿದೆಲ್ಲ ಸೇವೆ ಸ್ಥಗಿತ ಮಾಡಲು ನಿರ್ಧರಿಸಲಾಗಿದೆ. ಅಂದು ಬೆ.10ಕ್ಕೆ ಎಪಿಎಂಸಿ ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಸಿ ಹಳೇ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ವಿವಿಧ ಸಂಘಟನೆಗಳು ಸಿದ್ಧತೆ ನಡೆಸಿ‌ವೆ.

ಒಟ್ಟಾರೆ ಕಾವೇರಿ ಹೋರಾಟದ ಕಿಚ್ಚು ರೇಷ್ಮೆ ನಗರಿ ರಾಮನಗರಕ್ಕೂ ಮುಟ್ಟಿದ್ದು, ರಾಜ್ಯದ ಡಿಸಿಎಂ ಡಿಕೆ ಶಿವಕುಮಾರ್ ಸ್ವಂತ ಜಿಲ್ಲೆಯಲ್ಲಿ ಯಾವ ರೀತಿ ಬಂದ್ ನಡೆಯುತ್ತೆ, ಸರ್ಕಾರಕ್ಕೆ ಯಾವ ರೀತಿ ಬಿಸಿ ಮುಟ್ಟಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here