ನವದೆಹಲಿ, ಸೆ. 22: ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ಜರುಗಿದ ಜಿ 20 ಶೃಂಗಸಭೆಯ ಯಶಸ್ಸಿಗಾಗಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿ ಜತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಾತ್ರಿ ಸಂವಾದ ನಡೆಸಿದರು. ಶೃಂಗಸಭೆ ನಡೆದ ಭಾರತ ಮಂಟಪದಲ್ಲಿ ಪ್ರಧಾನಿಯವರು ಸಂವಾದ ನಡೆಸಿದರು. ಸಿಬ್ಬಂದಿವರ್ಗವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಜಿ 20 ಶೃಂಗಸಭೆಯ ಯಶಸ್ಸಿಗೆ ತಳಮಟ್ಟದಲ್ಲಿ ಕಾರ್ಯನಿರ್ವಹಿಸಿದವರೇ ಮುಖ್ಯ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ವ್ಯಾಪಕವಾದ ಯೋಜನೆ ಮತ್ತು ಅನುಷ್ಠಾನ ಪ್ರಕ್ರಿಯೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸಿಬ್ಬಂದಿ ತಮ್ಮ ಅನುಭವಗಳು ಮತ್ತು ಕಲಿಕೆಗಳನ್ನು ದಾಖಲಿಸಲು ಹೇಳಿದರು. ಹೀಗೆ ಸಿದ್ಧಪಡಿಸಿದ ದಾಖಲೆಗಳು ಭವಿಷ್ಯದ ಕಾರ್ಯಕ್ರಮಗಳಿಗೆ ಉಪಯುಕ್ತ ಮಾರ್ಗಸೂಚಿಗಳನ್ನು ಒದಗಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಇಂತಹ ದೊಡ್ಡ-ಪ್ರಮಾಣದ ಕಾರ್ಯಕ್ರಮಗಳ ಯಶಸ್ಸಿನ ರಹಸ್ಯವೆಂದರೆ, ಉದ್ಯಮದ ಪ್ರಾಮುಖ್ಯತೆಯ ಪ್ರಜ್ಞೆ ಮತ್ತು ಪ್ರತಿಯೊಬ್ಬರೂ ಉದ್ಯಮದ ಕೇಂದ್ರದಲ್ಲಿದ್ದೇವೆ ಎಂದು ಭಾವಿಸುವುದಾಗಿದೆ ಎಂದು ಮೋದಿ ಹೇಳಿದರು.
ಅನೌಪಚಾರಿಕವಾಗಿ ಭೇಟಿಯಾಗಲು ಮತ್ತು ಆಯಾ ಇಲಾಖೆಗಳಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಪ್ರಧಾನ ಮಂತ್ರಿಯವರು ಸಿಬ್ಬಂದಿಗೆ ಹೇಳಿದರು. ಪ್ರತಿಯೊಬ್ಬ ವ್ಯಕ್ತಿಯ ಕಾರ್ಯಕ್ಷಮತೆಯನ್ನು ವಿಶಾಲವಾಗಿ ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಇತರರ ಪ್ರಯತ್ನಗಳನ್ನು ತಿಳಿದುಕೊಳ್ಳುವುದು ನಮ್ಮನ್ನು ಉತ್ತಮವಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದು ಮೋದಿ ಹೇಳಿದರು.
ನಿತ್ಯದ ಕಚೇರಿ ಕೆಲಸದಲ್ಲಿ ನಮ್ಮ ಸಹೋದ್ಯೋಗಿಗಳ ಸಾಮರ್ಥ್ಯದ ಅರಿವು ನಮಗೆ ಆಗುವುದಿಲ್ಲ. ಆದರೆ, ತಳಮಟ್ಟದಲ್ಲಿ ಒಟ್ಟಿಗೆ ಕೆಲಸ ಮಾಡುವಾಗ, ದೂರ ಮತ್ತು ಅಪರಿಚಿತತೆಗಳು ಸೇತುವೆಯಾಗುತ್ತವೆ. ಅದು ತಂಡವಾಗಿ ಕೆಲಸ ಮಾಡಲು ಅನುಕೂಲ ಒದಗಿಸುತ್ತದೆ. ಸ್ವಚ್ಛತಾ ಅಭಿಯಾನದ ಉದಾಹರಣೆಯೊಂದಿಗೆ ಅವರು ಈ ವಿಷಯವನ್ನು ವಿವರಿಸಿದರು. ಜತೆಗೆ, ಇಲಾಖೆಗಳಲ್ಲಿ ಸಾಮೂಹಿಕ ಪ್ರಯತ್ನವನ್ನು ಮಾಡುವಂತೆ ಕೇಳಿಕೊಂಡರು. ಇದರಿಂದ ಯೋಜನೆ, ಕೆಲಸ ಕಾರ್ಯ ಹಬ್ಬವಾಗಲಿದೆ ಎಂದರು. ಸಾಮೂಹಿಕ ಮನೋಭಾವದಲ್ಲಿ ಶಕ್ತಿ ಇದೆ ಎಂದರು.
ಕ್ಲೀನರ್ಗಳು, ಚಾಲಕರು ಮತ್ತು ವಿವಿಧ ಸಚಿವಾಲಯಗಳ ಇತರ ಸಿಬ್ಬಂದಿ ಸೇರಿದಂತೆ ಜಿ20 ಶೃಂಗಸಭೆಯ ಯಶಸ್ಸಿಗೆ ಕೊಡುಗೆ ನೀಡಿದ ಸುಮಾರು 3000 ಜನರು ಈ ಸಂವಾದದಲ್ಲಿ ಭಾಗವಹಿಸಿದ್ದರು. ಸಂವಾದದಲ್ಲಿ ವಿವಿಧ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.