ಕೋರ್ ಕಮಿಟಿ ಸಭೆಗೆ ಬರಲೇ ಇಲ್ಲ ‘ಭಿನ್ನ’ ಶಾಸಕರು: ಬಿಜೆಪಿಯಲ್ಲಿ ಅಲ್ಲೋಲ-ಕಲ್ಲೋಲ

0
120

ಹುಬ್ಬಳ್ಳಿ: ಬಿಜೆಪಿ ಹಿರಿಯ ನಾಯಕರೇ ಸ್ವಪಕ್ಷದ ವಿರುದ್ಧ ಬುಸುಗುಡುತ್ತಿದ್ದಾರೆ. ಭಿನ್ನಮತ ಶಮನಕ್ಕೆ ಎಂದು ಕರೆದ ಸಭೆಯಲ್ಲೇ ಭಿನ್ನಮತ ಸ್ಫೋಟಗೊಂಡಿದೆ. ಒಂದು ಕಾಲದಲ್ಲಿ ಹುಬ್ಬಳ್ಳಿ-ಧಾರವಾಡ ಬಿಜೆಪಿಯ ಭದ್ರಕೋಟೆಯಾಗಿತ್ತು. ಇಲ್ಲಿ ಕಾಂಗ್ರೆಸ್ ಇದ್ದು ಇಲ್ಲದಂತಾಗಿತ್ತು. ಆದ್ರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದೇ ಸೇರಿದ್ದು ಹುಬ್ಬಳ್ಳಿ-ಧಾರವಾಡ ಬಿಜೆಪಿಯ ಕೋಟೆ ಒಡೆದ ಮನೆಯಂತಾಗಿದೆ. ಲೋಕಸಭೆ ಚುನಾವಣೆಗೆ ಶೆಟ್ಟರ್ ದಾಳ ಉರುಳಿಸಿದ್ದು, ಬಿಜೆಪಿಯಲ್ಲಿ ಅಲ್ಲೋಲ-ಕಲ್ಲೋಲ ಶುರುವಾಗಿದೆ.

ಕೋರ್ ಕಮಿಟಿ ಸಭೆಗೆ ಬರಲೇ ಇಲ್ಲ ‘ಭಿನ್ನ’ ಶಾಸಕರು

15 ದಿನದ ಹಿಂದಷ್ಟೇ ಶೆಟ್ಟರ್ ಆಪ್ತ ಹಾಗೂ ಮಾಜಿ ಸಚಿವ ಮುನೇನಕೊಪ್ಪ ಸ್ವಪಕ್ಷ ಬಿಜೆಪಿ ವಿರುದ್ಧ ಕೆಂಡಕಾರಿದ್ದರು. ಅಷ್ಟೇ ಅಲ್ಲ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಬಿಜೆಪಿ ವಿರುದ್ಧ ನೇರವಾಗಿ ಅಸಮಾಧಾನ ಹೊರಹಾಕಿದ್ದರು. ಬಿಜೆಪಿಯಲ್ಲಿ ಹೇಳೋರು ಇಲ್ಲ ಕೇಳೋರು ಇಲ್ಲ ಎಂದು ಗುಡುಗಿದ್ರು. ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದ ಜಗದೀಶ್ ಶೆಟ್ಟರ್, ಬಿಜೆಪಿ ತೊರೆಯೋ ಲಿಂಗಾಯತ ನಾಯಕರ ಪಟ್ಟಿಯನ್ನೇ ತೆರೆದಿಟ್ಟಿದ್ದರು. ಇದರ ಬೆನ್ನಲ್ಲೇ ಅಲರ್ಟ್ ಆದ ಬಿಜೆಪಿ ನಾಯಕರು ನಿನ್ನೆ(ಸೆಪ್ಟೆಂಬರ್ 11) ಮಹತ್ವದ ಕೋರ್ ಕಮಿಟಿ ಸಭೆ ಕರೆದಿತ್ತು. ಭಿನ್ನಮತ ಶಮನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಖಾಸಗಿ ಹೋಟೆಲ್​ನಲ್ಲಿ ಕೋರ್ ಕಮಿಟಿ ಸಭೆ ಹಮ್ಮಿಕೊಂಡಿದ್ರು. ಆದ್ರೆ, ಸಭೆಗೆ ಅಹ್ವಾನ ಇದ್ರೂ ಪ್ರದೀಪ್ ಶೆಟ್ಟರ್, ಮುನೇನಕೊಪ್ಪ, ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಗೈರಾಗುವ ಮೂಲಕ ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಇನ್ನು ಕೋರ್ ಕಮಿಟಿ ಸಭೆಯಲ್ಲಿ ಘಟಾನುಘಟಿ ನಾಯಕರು ಭಾಗಿಯಾಗಿದ್ರು. ಯಾರು ಏನೇ ಮಾತಾಡಿದ್ರು ನಮಗೆ ಕಾರ್ಯಕರ್ತರು ಮುಖ್ಯ. ಒಬ್ಬರು ಇಬ್ಬರು ಮಾತಾಡಿದರೆ ಅದು ಭಿನ್ನಮತ ಅಲ್ಲ. ಬಹಿರಂಗವಾಗಿ ಯಾರೂ ಪಕ್ಷದ ವಿರುದ್ಧ ಹೇಳಿಕೆ ಕೊಡಬಾರದು ಎಂದು ನಾಯಕರು ಖಡಕ್ ಸೂಚನೆ ಕೊಟ್ಟಿದ್ದಾರೆ. ಭಿನ್ನ ಶಾಸಕರು ಸಭೆಗೆ ಗೈರಾದ ಬಗ್ಗೆ ಬಿಜೆಪಿ ನಾಯಕರು ಕೊಟ್ಟ ಸ್ಪಷ್ಟನೆ ಇದು.

ಅಂತೂ ಇಂತೂ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನ ನಾಯಕರ ಗೈರು ಎತ್ತಿ ತೋರಿಸಿದ್ದು, ಇದನ್ನು ಪಕ್ಷದ ಹಿರಿಯ ನಾಯಕರು ಹೇಗೆ ಸರಿ ಮಾಡುತ್ತಾರೆ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here