ಸೆ.19ರ ಗಣೇಶ ಹಬ್ಬಕ್ಕೆ ಸಾರ್ವತ್ರಿಕ “ರಜೆ’ ಇಲ್ಲ !

0
110

ಈ ಬಾರಿ ಶ್ರೀ ಗಣೇಶ ಚತುರ್ಥಿ ಆಚರಿಸುವ ಸೆ.19ರಂದು ಸಾರ್ವತ್ರಿಕ ರಜೆ ಇಲ್ಲ; ಬದಲಾಗಿ ಒಂದು ದಿನ ಮೊದಲೇ ರಜೆ ಇರುತ್ತದೆ!

ಸೆ. 19ರಂದು ಗಣೇಶ ಹಬ್ಬದ ದಿನಕ್ಕೆ ಇರಬೇಕಾದ ರಜೆ ಸೆ.18ರಂದು ಎಂದು ಸರಕಾರದ ಕ್ಯಾಲೆಂಡರ್‌ನಲ್ಲಿ ಉಲ್ಲೇಖವಾಗಿದೆ. ಹೀಗಾಗಿ, ಕರ್ತವ್ಯದ ದಿನದಲ್ಲೇ ಹಬ್ಬ ಆಚರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕರಾವಳಿ ಭಾಗದಲ್ಲಿ ಹಲವರಿಂದ ಆಕ್ಷೇಪಕ್ಕೂ ಕಾರಣವಾಗಿದೆ.

ರಾಜ್ಯ ಸರಕಾರ ಪ್ರಕಟಿಸಿದ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಸೆ.18ರಂದು ವರಸಿದ್ಧಿವಿನಾಯಕ ವ್ರತ ರಜೆ ಎಂದಿದೆ.

ಪಂಚಾಂಗ ಪ್ರಕಾರ ಸೆ.18ರಂದು ಗೌರಿ ತದಿಗೆ. ಗಣೇಶ ಚತುರ್ಥಿ ಸೆ.19ರಂದು ಇದೆ. ಕರಾವಳಿ ಭಾಗದಲ್ಲಿಯೂ ಗಣೇಶ ಹಬ್ಬ ಸೆ.19ರಂದು ನಡೆಯುವ ಕಾರಣದಿಂದ ರಜೆಯ ವಿಚಾರ ಇದೀಗ ಗೊಂದಲಕ್ಕೆ ಕಾರಣವಾಗಿದೆ. ದ.ಕ. ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಪೋಷಕರು ಈಗಾಗಲೇ ಶಾಲಾಡಳಿತವನ್ನು ಸಂಪರ್ಕಿಸಿ ಗಣೇಶ ಚತುರ್ಥಿ ರಜೆ ಸೆ.19ರಂದೇ ನೀಡುವಂತೆ ಕೋರಿದ್ದಾರೆ. ಆದರೆ “ಸಾರ್ವತ್ರಿಕ ರಜೆ ಬದಲಾವಣೆ ಬಗ್ಗೆ ಸರಕಾರವೇ ತೀರ್ಮಾನ ಮಾಡಬೇಕಾಗುತ್ತದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶಾಸಕ ವೇದವ್ಯಾಸ ಕಾಮತ್‌ ಅವರು “ಕರಾವಳಿಯಲ್ಲಿ ಸೆ.19ಕ್ಕೆ ಗಣೇಶ ಹಬ್ಬ ಇರುವುದು. ಆದರೆ ರಜೆ ಕೊಟ್ಟಿರುವುದು ಸೆ.18ಕ್ಕೆ. ಹೀಗಾಗಿ ಹಬ್ಬ ಆಚರಣೆಗೆ ಕರಾವಳಿ ಭಾಗದಲ್ಲಿ ಸಮಸ್ಯೆ ಆಗಲಿದೆ. ಈ ಬಗ್ಗೆ ಸರಕಾರ ಕರಾವಳಿ ಭಾಗದ ಪ್ರಮುಖರಿಂದ ಮಾಹಿತಿ ಪಡೆದು ಹಬ್ಬ ಆಚರಣೆಯ ವಿವರ ತಿಳಿದು ದಿನಾಂಕ ಬದಲಾವಣೆ ಮಾಡಬೇಕು. ಇಲ್ಲವಾದರೆ, ಕರಾವಳಿಗೆ ಪ್ರತ್ಯೇಕವಾಗಿ ಗಣೇಶ ಹಬ್ಬದ ಕಾರಣಕ್ಕಾಗಿ ಸೆ.19ರಂದು ರಜೆ ನೀಡಲು ಸರಕಾರವು ಜಿಲ್ಲಾಡಳಿತಕ್ಕೆ ಸೂಚಿಸಬೇಕು’ ಎಂದು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here