ವಿಶೇಷ ಕಾರ್ಯಕ್ರಮಗಳ ಮೂಲಕ ಜನರ ಗಮನ ಸೆಳೆದ ಮಡಿಕೇರಿಯ ಮಕ್ಕಳ ದಸರಾ

0
91

ಮಡಿಕೇರಿ : ಮಡಿಕೇರಿಯಲ್ಲಿ ನಡೆದ ಮಕ್ಕಳ ದಸರಾವು ವಿಶೇಷ ಕಾರ್ಯಕ್ರಮಗಳ ಮೂಲಕ ಜನರ ಗಮನ ಸೆಳೆಯಿತು. ಮಕ್ಕಳು ತರಕಾರಿ ಹಾಗೂ ತಿನಿಸುಗಳನ್ನ ಮಾರಾಟ ಮಾಡಿ ತಮ್ಮ ವ್ಯಾಪಾರ ಕೌಶಲ್ಯ ಪ್ರದರ್ಶಿಸಿದರು.

ಒಂದೆಡೆ ಭರ್ಜರಿ ವ್ಯಾಪಾರ, ಮತ್ತೊಂದೆಡೆ ದೇವಾನುದೇವತೆಗಳ ಆರ್ಭಟ. ವೇದಿಕೆಯಲ್ಲಿ ಬಗೆ ಬಗೆಯ ವೇಷ ತೊಟ್ಟು ಗಮನ ಸೆಳೆದ ಪುಟಾಣಿಗಳು. ಚಿಣ್ಣರ ಕೈಯಿಂದ ಪಾನಿಪುರಿ, ಬೇಲ್ ಪುರಿ, ಜೋಳಪುರಿ ಸೇರಿದಂತೆ ಬಗೆಬಗೆಯ ತಿನಿಸುಗಳು. ಎಲ್ಲೆಲ್ಲೂ ಮಕ್ಕಳದ್ದೆ ಸಂಭ್ರಮ. ಸಾರ್ವಜನಿಕರು ಮಕ್ಕಳ ಸಂತೆ, ಅಂಗಡಿ ಮಳಿಗೆಗಳನ್ನು ಕುತೂಹಲದಿಂದ ವೀಕ್ಷಿಸಿದರು.

ಮಕ್ಕಳ ದಸರಾ ಅಂಗವಾಗಿ ಮಕ್ಕಳ ಸಂತೆ, ಮಕ್ಕಳ ಅಂಗಡಿ, ಮಕ್ಕಳ ಮಂಟಪ, ಛದ್ಮವೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಮಡಿಕೇರಿ ದಸರಾ ಸಮಿತಿ ಸಹಯೋಗದಲ್ಲಿ ನಗರದ ಗಾಂಧಿ ಮೈದಾನದಲ್ಲಿ ನಡೆದ 10ನೇ ವರ್ಷದ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಮಕ್ಕಳ ಸಂತೆ ಹಾಗೂ ಅಂಗಡಿ ಸ್ಪರ್ಧೆಯಲ್ಲಿ ಸುಮಾರು 100 ಕ್ಕೂ ಅಧಿಕ ಸ್ಟಾಲ್‌ಗಳನ್ನು ಹಾಕಲಾಗಿತ್ತು. ಬಗೆ ಬಗೆಯ ತರಕಾರಿಗಳು, ಸೊಪ್ಪುಗಳು, ಕಾಡಿನಲ್ಲಿ ಸಿಗುವ ಕೆಸ, ತೆರ್ಮೆ ಸೊಪ್ಪು, ವಿವಿಧ ಜಾತಿಯ ಹಣ್ಣುಗಳನ್ನು ಮಕ್ಕಳು ಭರ್ಜರಿಯಾಗಿ ವ್ಯಾಪಾರ ಮಾಡಿದರು.

ಮಡಿಕೇರಿಯ ಬಾಲಕಿಯರ ಬಾಲಮಂದಿರದ ವಿದ್ಯಾರ್ಥಿನಿಯರು ತಾವೇ ಸ್ವತಃ ತಯಾರಿಸಿದ್ದ ಕರಕುಶಲ ವಸ್ತುಗಳನ್ನು ಪ್ರದರ್ಶಿಸಿದರು.

ಮಕ್ಕಳ ಮಂಟಪದಲ್ಲಿ ಈ ಬಾರಿ 30ಕ್ಕೂ ಅಧಿಕ ಮಕ್ಕಳ ಮಂಟಪ ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳಂತೆ ಮಕ್ಕಳು ಕೂಡ ವಿವಿಧ ಕಥಾ ಸಾರಾಂಶಗಳನ್ನು ಒಳಗೊಂಡ ಮಂಟಪಗಳನ್ನು ರಚಿಸಿದ್ದರು. ಮಂಟಪದಲ್ಲಿ ದೇವತೆಗಳು ದುಷ್ಟರನ್ನು ಸಂಹಾರ ಮಾಡುವ ದೃಶ್ಯಗಳನ್ನು ಪ್ರದರ್ಶಿಸಿದರು.

ಛದ್ಮವೇಷ ಸ್ಪರ್ಧೆಯಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ಮಕ್ಕಳು ವಿವಿಧ ವೇಷ ತೊಟ್ಟು ಪ್ರೇಕ್ಷಕರ ಗಮನ ಸೆಳೆದರು.

LEAVE A REPLY

Please enter your comment!
Please enter your name here