ಎರಡೂ ರಾಜ್ಯಗಳಲ್ಲಿ ರೈತರ ಹೋರಾಟ ತೀವ್ರವಾಗುತ್ತಿರುವ ಹೊತ್ತಲ್ಲಿ ಮಂಗಳವಾರ ಸಭೆ ಕರೆದಿರುವ CWRC

0
84

ನವದೆಹಲಿ: ಕಾವೇರಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಕಾವೇರಿ ನೀರು ಹರಿಸುವಂತೆ ತಮಿಳುನಾಡು ರೈತರು ಪ್ರತಿಭಟನೆ ನಡೆಸುತ್ತಿದ್ದರೇ ಇತ್ತ ಕರ್ನಾಟಕದಲ್ಲಿ ನೀರು ಹರಿಸದಂತೆ ಒತ್ತಾಯಿಸಿ ಮಂಡ್ಯ ಬಂದ್ ಬಳಿಕ ಬೆಂಗಳೂರು ಬಂದ್‌ಗೂ ಕರೆ ನೀಡಲಾಗಿದೆ. ಎರಡೂ ರಾಜ್ಯಗಳಲ್ಲಿ ರೈತರ ಹೋರಾಟ ತೀವ್ರವಾಗುತ್ತಿರುವ ಹೊತ್ತಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಮಂಗಳವಾರ ಸಭೆ ಕರೆದಿದೆ.

ಮಂಗಳವಾರ ಬೆಳಗ್ಗೆ 11 ಗಂಟೆಗೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದೆ. ಸೆ.13ರಂದು ಹದಿನೈದು ದಿನ ನಿತ್ಯ 5,000 ಕ್ಯೂಸೆಕ್ ನೀರು ಹರಿಸುವಂತೆ ನೀಡಿದ ಆದೇಶ ಅಂತ್ಯವಾಗುತ್ತಿರುವ ಹಿನ್ನೆಲೆ ಈ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ತಮಿಳುನಾಡಿಗೆ ನೀರು ಹರಿಸುವ ಬಗ್ಗೆ ಚರ್ಚೆ ನಡೆಯಲಿದೆ.

ಮಂಗಳವಾರದ ಸಭೆಯಲ್ಲಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳಲು ಕರ್ನಾಟಕ ನಿರ್ಧರಿಸಿದೆ. ನೀರಿನ ಕೊರತೆ ನಡುವೆ CWRC, CWMA ನೀಡಿರುವ ಎಲ್ಲಾ ಆದೇಶಗಳನ್ನು ಪಾಲಿಸಿದೆ. ಈಗ ನೀರಿನ ಕೊರತೆ ಹೆಚ್ಚಳವಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಸಣ್ಣ ಪ್ರಮಾಣದ ಕೃಷಿಗೂ ಸಮಸ್ಯೆಯಾಗುವ ಸಾಧ್ಯತೆಗಳಿದೆ. ಈಗಾಗಲೇ ರಾಜ್ಯದಲ್ಲಿ ಪ್ರತಿಭಟನೆಗಳು ಶುರುವಾಗಿದ್ದು, ಬೆಂಗಳೂರು ಬಂದ್‌ಗೂ ಕರೆ ನೀಡಲಾಗಿದೆ. ಈ ಹಂತದಲ್ಲಿ ನೀರು ಹರಿಸಲು ಸೂಚಿಸುವುದು ಸೂಚ್ಯವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾವೇರಿ ನೀರಿಗಾಗಿ ಎರಡು ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆ ಕಾವೇರಿ ನೀರು ನಿಯಂತ್ರಣ ಸಮಿತಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದೆ. ಈ ಹಿನ್ನೆಲೆ ಮಳೆ ಪ್ರಮಾಣ, ಅಣೆಕಟ್ಟುಗಳಿಗೆ ಬರುತ್ತಿರುವ ಒಳ ಹರಿವು ಹಾಗೂ ಜಲಾಶಯಗಳಲ್ಲಿನ ನೀರಿನ ಮಟ್ಟವನ್ನು ಲೆಕ್ಕ ಹಾಕಿ ನೀರು ಬಿಡುವ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here