ಮರುಜೀವ ಪಡೆಯಲಿದೆಯಾ ಚಂದ್ರನ ಅಂಗಳದಲ್ಲಿ ಇರುವ ವಿಕ್ರಂ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್?

0
96

ನವದೆಹಲಿ: ಚಂದ್ರಯಾನ-3 ಯೋಜನೆಯ ಮಹತ್ವದ ಘಟ್ಟವೊಂದಕ್ಕೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 22 ರಂದು ಚಂದ್ರದ ದಕ್ಷಿಣ ಧ್ರುವದಲ್ಲಿ ಸೂರ್ಯೋದಯ ಆಗಲಿದೆ. ಆಗ ಚಂದ್ರನ ಅಂಗಳದಲ್ಲಿ ಇರುವ ವಿಕ್ರಂ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಮತ್ತೆ ಮರುಜೀವ ಪಡೆಯುತ್ತಾ ಅನ್ನೋ ಕೌತುಕವನ್ನ ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ.

ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಶಿವಶಕ್ತಿ ಪಾಯಿಂಟ್ ಮೇಲೆ ಸೂರ್ಯನ ಬೆಳಕು ಚೆಲ್ಲಲಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಮಿಷನ್‌ನ ಲ್ಯಾಂಡರ್ ಮತ್ತು ರೋವರ್ ಮಾಡ್ಯೂಲ್‌ಗಳಾದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್‌ಗಳನ್ನ ಪುನರುಜ್ಜೀವನಗೊಳಿಸಲು ಸಖಲ ತಯಾರಿ ನಡೆಸುತ್ತಿದೆ.

ಕಳೆದ ತಿಂಗಳು ಆಗಸ್ಟ್ 23 ರಂದು ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲೆ ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು. ಆ ನಂತರ ವಿಕ್ರಂ ಲ್ಯಾಂಡರ್ ಒಳಗಿನಿಂದ ಪ್ರಗ್ಯಾನ್ ರೋವರ್ ಚಂದ್ರನ ಅಂಗಳದಲ್ಲಿ ಸಂಚಾರ ಮಾಡಿತ್ತು. ಇದಾದ 14 ಭೂಮಿಯ ದಿನಗಳ ಬಳಿಕ ಚಂದ್ರನ ದಕ್ಷಿಣ ಧ್ರುವದಲ್ಲಿ ರಾತ್ರಿ ಆರಂಭವಾಗುವುದಕ್ಕೂ ಮುನ್ನವೇ ಮತ್ತೊಂದು ಬಾರಿ ವಿಕ್ರಂ ಲ್ಯಾಂಡರ್ ಅನ್ನು ಕಿಕ್ ಸ್ಟಾರ್ಟ್ ಮಾಡಿ 40 ಸೆಂಟಿಮೀಟರ್‌ಗಳಷ್ಟು ಮೇಲಕ್ಕೆ ಎತ್ತರಿಸಿ, ಮತ್ತೆ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿತ್ತು. ನಂತರ ಎರಡೂ ಉಪಕರಣಗಳು ನಿದ್ರೆಗೆ ಜಾರಿದ್ದವು.

ಇದೀಗ ಸುಸ್ಥಿತಿಯಲ್ಲಿ ಇರುವ ವಿಕ್ರಂ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್, ಶುಕ್ರವಾರ ಸೂರ್ಯೋದಯ ಆದ ಬಳಿಕ ಮತ್ತೆ ನಿದ್ರೆಯಿಂದ ಎಚ್ಚರ ಆಗುವ ನಿರೀಕ್ಷೆ ಇದೆ. ಒಂದು ವೇಳೆ ಈ ಉಪಕರಣಗಳು ಕೆಲಸ ಮಾಡದೇ ಇದ್ದರೆ ಇವುಗಳು ಚಂದ್ರನ ಅಂಗಳದಲ್ಲಿ ಶಾಶ್ವತವಾಗಿ ಭಾರತದ ಬಾಹ್ಯಾಕಾಶ ಪ್ರಯೋಗದ ರಾಯಭಾರಿಗಳ ರೀತಿಯಲ್ಲಿ ಉಳಿದು ಹೋಗಲಿವೆ. ಒಂದು ವೇಳೆ ಈ ಕಾರ್ಯ ಯಶಸ್ವಿಯಾದರೆ ಇಸ್ರೋ ಬಾಹ್ಯಾಕಾಶ ಪರಿಶೋಧನೆಯಲ್ಲಿ ಮಹತ್ವದ ಮೈಲುಗಲ್ಲನ್ನು ಸಾಧಿಸಲಿದೆ. ಜೊತೆಗೆ ಮುಂದಿನ 14 ದಿನಗಳ ಕಾಲ ಚಂದ್ರನ ಅಂಗಳದಲ್ಲಿ ಇನ್ನಷ್ಟು ಮಾಹಿತಿಗಳನ್ನ ಸಂಗ್ರಹಿಸಲು ನೆರವಾಗಲಿದೆ.

ಈ ಬಾರಿ ಚಂದ್ರನ ಮೈಲ್ಮೈ ವೈಶಿಷ್ಟ್ಯಗಳು, ಉಷ್ಣ ವಾತಾವರಣದ ಗುಣಲಕ್ಷಣಗಳು ಹಾಗೂ ಮಣ್ಣಿನ ಅಂಶಗಳನ್ನ ಅಧ್ಯಯನ ನಡೆಸುವ ಉದ್ದೇಶ ಹೊಂದಲಾಗಿದೆ.

LEAVE A REPLY

Please enter your comment!
Please enter your name here