ಕಲಬುರಗಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ಮಗಳದ್ದು ಆತ್ಮಹತ್ಯೆಯಲ್ಲ, ಕೊಲೆ ಅಂತಿರೋ ಕುಟುಂಬ

0
106

ಕಲಬುರಗಿ: ತಾಲೂಕಿನ ಸೀತನೂರು ಗ್ರಾಮದಲ್ಲಿ ಇಂದು(ಸೆ.12) ಮುಂಜಾನೆ ಇಪ್ಪತ್ತಾರು ವರ್ಷದ ಶಾಹೀದಾ ಬೇಗಂ ಎನ್ನುವ ಮಹಿಳೆ ಶವ ಪತ್ತೆಯಾಗಿದ್ದು, ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ಕುಟುಂಬದವರು ತಮ್ಮ ಮಗಳದ್ದು ಸಹಜ ಸಾವಲ್ಲ, ಬದಲಾಗಿ ಕೊಲೆ ಎಂದು ಆರೋಪಿಸುತ್ತಿದ್ದಾರೆ. ಇನ್ನು ಜೇವರ್ಗಿ (Jevargi) ತಾಲೂಕಿನ ಗಂವ್ಹಾರ್ ಗ್ರಾಮದ ನಿವಾಸಿಯಾಗಿದ್ದ ಶಾಹೀದಾ ಬೇಗಂ ಅವರು ಕಲಬುರಗಿ (Kalaburagi) ತಾಲೂಕಿನ ಸೀತನೂರು ಗ್ರಾಮದ ಖಾಜಾ ಹುಸೇನ್ ಜೊತೆ ಮೂರು ವರ್ಷದ ಹಿಂದೆ ಮದುವೆ ಮಾಡಲಾಗಿತ್ತು. ಕೂಲಿ ಕೆಲಸ ಮಾಡಿಕೊಂಡಿದ್ದ ಶಾಹೀದಾ ಬೇಗಂ ಹೆತ್ತವರು, ತಮ್ಮ ಬಳಿಯಿದ್ದ ಅಲ್ಪಸ್ವಲ್ಪ ಜಾಗವನ್ನು ಮಾರಿ, ಮಗಳ ಮದುವೆ ಮಾಡಿದ್ದರು.

ಮದುವೆ ಸಮಯದಲ್ಲಿ ನಲವತ್ತು ಗ್ರಾಂ ಬಂಗಾರ, ಐವತ್ತು ಸಾವಿರ ವರದಕ್ಷಿಣೆ ನೀಡಿ ಮದುವೆ ಮಾಡಿಕೊಟ್ಟಿದ್ದರು. ಮಗಳು ಚೆನ್ನಾಗಿರಲಿ ಅಂತ ಹೆತ್ತವರು ಕನಸು ಕಂಡಿದ್ದರು. ಆದ್ರೆ, ಮದುವೆಯಾದ ಮೇಲೆ ಮಗಳ ಬದಕು ಹೂವಿನ ಹಾಸಿಗೆ ಆಗಿರದೆ, ಮುಳ್ಳಿನ ದಾರಿಯಂತಾಗಿತ್ತಂತೆ. ಕೃಷಿ ಕೆಲಸ ಮಾಡಿಕೊಂಡದಿದ್ದ ಪತಿ ಖಾಜಾ ಹುಸೇನ್, ಪ್ರತಿನಿತ್ಯ ಕುಡಿದು ಬಂದು ಶಾಹೀದಾ ಬೇಗಂ ಗೆ ಕಿರುಕುಳ ನೀಡುವುದು, ಹೊಡೆಯುವುದನ್ನು ಮಾಡುತ್ತಿದ್ದನಂತೆ.

ಹೌದು, ಖಾಜಾ ಹುಸೇನ್, ಪ್ರತಿ ದಿನ ಶಾಹೀದಾ ಬೇಗಂ,ತವರು ಮನೆಗೆ ಹೋಗಿ ಬಂಗಾರ ತರುವಂತೆ ಪ್ರತಿದಿನ ಪೀಡಿಸುತ್ತಿದ್ದನಂತೆ. ಈ ಬಗ್ಗೆ ಅನೇಕ ಬಾರಿ ರಾಜಿ ಪಂಚಾಯತಿಗಳು ಕೂಡ ಆಗಿದ್ದಾವಂತೆ. ಹಣ ಇದ್ದಾಗ ಇನ್ನಷ್ಟು ಬಂಗಾರ ಕೊಡಿಸೋದಾಗಿ ಹೆತ್ತವರು ಕೂಡ ಹೇಳಿದ್ದರಂತೆ. ಆದ್ರೆ, ಖಾಜಾ ಹುಸೇನ್ ಮಾತ್ರ ಕಿರುಕುಳವನ್ನು ನಿಲ್ಲಿಸಿರಲಿಲ್ಲವಂತೆ. ಇನ್ನು ತನ್ನ ಹೆತ್ತವರು ಕೂಲಿ ಕೆಲಸ ಮಾಡಲು ಹೈದ್ರಾಬಾದ್​ಗೆ ಹೋಗಿದ್ದಾರೆ. ಇರುವ ಹಣವನ್ನೆಲ್ಲ ಖರ್ಚು ಮಾಡಿ ತನ್ನ ಮದುವೆ ಮಾಡಿದ್ದಾರೆ. ಮತ್ತೆ ತಾನು ತವರು ಮನೆಗೆ ಹೋಗಿ ಬಂಗಾರ ಕೇಳಿದ್ರೆ, ಹೆತ್ತವರು ಎಲ್ಲಿಂದ ತರ್ತಾರೆ ಎಂದು ತಿಳದಿದ್ದ ಶಾಹೀದಾ ಬೇಗಂ, ತಂದೆ ತಾಯಿಗೆ ತನ್ನ ನೋವನ್ನು ಹೆಚ್ಚಾಗಿ ಹೇಳಿರಲಿಲ್ಲವಂತೆ. ತನ್ನ ಸಹೋದರಿಯರ ಮುಂದೆ ನೋವನ್ನು ಹೇಳಿಕೊಂಡಿದ್ದಳಂತೆ.

ಆದ್ರೆ, ಇಂದು ಮುಂಜಾನೆ ಶಾಗೀದಾ ಬೇಗಂ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿದ್ದಾಳೆ ಎನ್ನುವ ಸುದ್ದಿ ಹೆತ್ತವರಿಗೆ ಪರಿಚಿತರಿಂದ ಗೊತ್ತಾಗಿತ್ತು. ಹೀಗಾಗಿ ಮಗಳ ಸಾವಿನ ಸುದ್ದಿ ಕೇಳಿ ಬಂದ ಹೆತ್ತವರು ಶಾಕ್ ಆಗಿದ್ದರು. ಕೈ ಸೇರಿದಂತೆ ಅನೇಕ ಕಡೆ ಗಾಯಗಳು ಇದ್ದಿದ್ದರಿಂದ, ತಮ್ಮ ಮಗಳನ್ನು ಆಕೆಯ ಪತಿ ಮತ್ತು ಕುಟುಂಬದವರು ಹೊಡೆದು ಕೊಲೆ ಮಾಡಿ, ನಂತರ ನೇಣು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಸದ್ಯ ಶಾಹೀದಾ ಬೇಗಂ ಸಾವಿನ ಬಗ್ಗೆ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ. ಈ ಬಗ್ಗೆ ಶಾಹೀದಾ ಪತಿ ಖಾಜಾ ಹುಸೇನ್​ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶಾಹೀದಾ ಪತಿ ಖಾಜಾ ಹುಸೇನ್, ಶಾಹೀದಾಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳುತ್ತಿದ್ದಾನಂತೆ. ಆದ್ರೆ, ಪೊಲೀಸರ ವಿಚಾರಣೆ ಮತ್ತು ಮರಣೋತ್ತರ ವರದಿ ನಂತರ, ಶಾಹೀದಾ ಬೇಗಂಳದ್ದು ಆತ್ಮಹತ್ಯೆಯಾ ಅಥವಾ ಕೊಲೆಯಾ ಅನ್ನೋದು ಗೊತ್ತಾಗಲಿದೆ.

LEAVE A REPLY

Please enter your comment!
Please enter your name here