ಕರ್ನಾಟಕ ರಾಜ್ಯ ಮುಕ್ತ ವಿವಿಯ ಕರ್ಮಕಾಂಡ ಬಯಲಿಗೆ, ಹಣ ಕೊಟ್ಟರೆ ಪರೀಕ್ಷೆಯಲ್ಲಿ ಕಾಪಿಗೆ ಅವಕಾಶ

0
114

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಲಂಚಾವತಾರ ಬಯಲಿಗೆ ಬಂದಿದೆ. ಹಣ ಕೊಟ್ಟರೆ ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ವಿದ್ಯಾರ್ಥಿಯೊಬ್ಬ ಪ್ರಾಧ್ಯಾಪಕರ ಜೊತೆ ಮಾತನಾಡಿರುವ ಆಡಿಯೋ ವೈರಲ್ ಆಗುತ್ತಿದೆ.

ಎಂಎಸ್​​​ಸಿ ಪ್ರಶ್ನೆ ಪತ್ರಿಕೆಗೆ 1500 ರೂ., ಎಂಎ ಮತ್ತು ಎಂಕಾಮ್ ಪ್ರಶ್ನೆ ಪತ್ರಿಕೆಗೆ 1 ಸಾವಿರ ರೂಪಾಯಿ ಕೊಟ್ಟರೆ ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಹಣ ಕೊಡದ ವಿದ್ಯಾರ್ಥಿಗಳನ್ನು ಬೇರೆ ಪರೀಕ್ಷಾ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸುತ್ತಾರೆ. ಈ ಸಂಬಂಧ ವಿವಿ ಪ್ರಾಧ್ಯಾಪಕರ ಜೊತೆ ವಿದ್ಯಾರ್ಥಿಯೊಬ್ಬ ಮಾತನಾಡಿರುವ ಆಡಿಯೋ ವೈರಲ್ ಆಗುವ ಮೂಲಕ ವಿವಿಯ ಲಂಚಾವತಾರ ಬಯಲಿಗೆ ಬಂದಿದೆ.

ಆಡಿಯೋದಲ್ಲಿ ಇರುವಂತೆ, ಚಿತ್ರದುರ್ಗ ಪರೀಕ್ಷಾ ಕೇಂದ್ರದಲ್ಲಿ ಒಂದು ಸೆಮಿಸ್ಟರ್​​ಗೆ ಮೂರು ಸಾವಿರ ರೂಪಾಯಿ ಲಂಚ ಪಡೆದು ಕಾಪಿ ಹೊಡೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಹಣ ಕೊಡದ ವಿದ್ಯಾರ್ಥಿಗಳನ್ನು ಪ್ರತ್ಯೇಕ ರೂಮ್​ನಲ್ಲಿ ಕೂರಿಸಿ ಪರೀಕ್ಷೆ ಬರೆಸುವ ಮೂಲಕ ಟಾರ್ಗೆಟ್ ಮಾಡಲಾಗುತ್ತದೆ. ಬೆಂಗಳೂರಿನ ಯುವತಿಯೊಬ್ಬೊಳು ಇದರ ವಿರುದ್ಧ ಧ್ವನಿ ಎತ್ತಿದ್ದಳು.

ಚಿತ್ರದುರ್ಗ ಕೇಂದ್ರ ಬೇಡ ಎಂದು ದಾವಣಗೆರೆ ಪರೀಕ್ಷಾ ಕೇಂದ್ರ ತೆಗೆದುಕೊಂಡೆ. ಆದರೆ, ಚಿತ್ರದುರ್ಗಕ್ಕಿಂತ ಹೆಚ್ಚು ಲಂಚಾವತಾರ ಇಲ್ಲಿದೆ. ಚಿತ್ರದುರ್ಗದಲ್ಲಿ ಒಂದು ಸೆಮೆಸ್ಟರ್​ಗೆ 1 ಸಾವಿರ ಕೇಳಿದರೆ, ದಾವಣಗೆರೆಯಲ್ಲಿ ಒಂದು ವಿಷಯಕ್ಕೆ 1 ಸಾವಿರ ಕೇಳಿದ್ದಾರೆ.

ದಾವಣಗೆರೆ ರೀಜನಲ್ ಸೆಂಟರ್​ನ ಕೊಠಡಿಯೊಂದರಲ್ಲಿ 36 ಮಂದಿ ಇದ್ದರು. ಯಾರು ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದಾಗಿತ್ತು. ನೋಂದಣಿ ಸಂಖ್ಯೆ ಏನೂ ಇಲ್ಲ. ಇದನ್ನು ಪರೀಕ್ಷಾ ಸಂಯೋಜಕರಲ್ಲಿ ಪ್ರಶ್ನಿಸಿದಾಗ, ಬೆಳಗ್ಗೆಯಿಂದ ನಾನು ತಿಂಡಿ ತಿಂದಿಲ್ಲ, ಅದನ್ನು ವಿಚಾರ ಮಾಡುತ್ತಿದ್ದೇನೆ ಎಂದು ಹೇಳಿದ್ದಾಗಿ ವಿದ್ಯಾರ್ಥಿ ಹೇಳುವ ಆಡಿಯೋ ವೈರಲ್ ಆಗಿದೆ.

ಅಲ್ಲದೆ, ಲಂಚಾವತಾರದ ಬಗ್ಗೆ ಉಪ ಕುಲಾಪತಿಗೆ ತಿಳಿಸಲೆಂದು ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಮುಂದಿನ ಪರೀಕ್ಷೆಯ ವೇಳೆ ನಾನು ಕುಳಿತಿದ್ದ ರೂಮ್​ನಲ್ಲಿ 36 ವಿದ್ಯಾರ್ಥಿಗಳಲ್ಲಿ 12 ಮಂದಿ ಮಾತ್ರ ಇದ್ದರು. ಉಳಿದವರು ಎಲ್ಲಿ ಎಂದು ಸಿಬ್ಬಂದಿಯನ್ನು ಕೇಳಿದರೆ, ಅವರೆಲ್ಲ ಕಾಪಿ ಮಾಡುವವರು ಬಂದಿಲ್ಲ ಎಂದು ಹೇಳಿದ್ದಾರೆ. ಪ್ರಶ್ನೆ ಪತ್ರಿಕೆ ಬಂದ ನಂತರ ಉಳಿದವರನ್ನು ಬೇರೆ ರೂಮ್​ನಲ್ಲಿ ಕೂರಿಸಿ ಅವರಿಂದ ತಲಾ ಸಾವಿರ ರೂ. ಪಡೆದು ಪರೀಕ್ಷೆ ಬರೆಸಿದ್ದಾರೆ ಎಂದು ವಿದ್ಯಾರ್ಥಿ ಹೇಳಿದ್ದಾನೆ.

ಘಟನೆ ಸಂಬಂಧ ದಾವಣಗೆರೆ ಎಸ್​ಪಿಗೆ ತಿಳಿಸಿದಾಗ ಅವರು ಒಂದು ವ್ಯಾನ್​ನಲ್ಲಿ ಕಳುಹಿಸಿಕೊಟ್ಟರು. ಇದು ಐದನೇ ವಿಷಯದ ಪರೀಕ್ಷೆಯಾಗಿತ್ತು. ಅಂದು ಎಲ್ಲವೂ ಸರಿಯಾಗಿಯೇ ನಡೆದಿತ್ತು. ಆದರೆ, ಪರೀಕ್ಷಾ ಸಂಯೋಜಕರು ನನ್ನನ್ನು ಟಾರ್ಗೆಟ್ ಮಾಡಿದ್ದರು. ನೀನು ವಿಸಿಗೆ ಹೋಗಿ ಹೇಳಿ ಏನ್ ಮಾಡ್ತಿಯೋ ಮಾಡು ಅಂತ ಅವರು ಹೇಳಿದ್ದಾಗಿ ವಿದ್ಯಾರ್ಥಿ ಹೇಳುವುದು ಆಡಿಯೋದಲ್ಲಿ ಇದೆ.

LEAVE A REPLY

Please enter your comment!
Please enter your name here