ಬೆಂಗಳೂರು : ನ.25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಸ್ಪರ್ಧೆ ನಡೆಯಲಿದೆ.ಪುತ್ತೂರು ಶಾಸಕ ಅಶೋಕ್ ರೈಗಳ ಸಾರಥ್ಯದಲ್ಲಿ ಬೆಂಗಳೂರು ಕಂಬಳಕ್ಕೆ ಸಕಲ ಸಿದ್ದತೆ ನಡೆಯುತ್ತಿದೆ. 2023-24ರ ಕಂಬಳ ಸೀಸನ್ ಈಗಾಗಲೇ ಆರಂಭವಾಗಿದ್ದು, ಬಂಟ್ವಾಳ ತಾಲೂಕಿನ ಕಕ್ಯಪದವು ಎಂಬಲ್ಲಿ ಮೊದಲ ಕಂಬಳ ನಡೆದಿದೆ. 189 ಜೋಡಿ ಕೋಣಗಳು ಈ ಕೂಟದಲ್ಲಿ ಭಾಗವಹಿಸಿದ್ದವು. ಇದೀಗ ಈ ಕೋಣಗಳು ಬೆಂಗಳೂರು ಲಾರಿ ಏರಲು ಸಿದ್ದವಾಗಿವೆ.
ಗುರುವಾರ (ನ.23) ಎಲ್ಲಾ ಓಟದ ಕೋಣಗಳೊಂದಿಗೆ ಯಜಮಾನರುಗಳು ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಗುರುವಾರ ಬೆಳಗ್ಗೆ 9 ಗಂಟೆಯ ಸುಮಾರಿಗೆ ಉಪ್ಪಿನಂಗಡಿಯ ಕಾಲೇಜು ಮೈದಾನದಲ್ಲಿ ಸೇರಲಿದ್ದಾರೆ. ಅಲ್ಲಿ ಗಣಹೋಮ ನಡೆದು, ಬಳಿಕ ಉಪಹಾರ ಸೇವಿಸಿ 10.30ಕ್ಕೆ ಸರಿಯಾಗಿ ಬೆಂಗಳೂರು ಕಡೆ ಪ್ರಯಾಣ ಆರಂಭಿಸಲಿದ್ದಾರೆ. ಇದಕ್ಕಾಗಿ ಶಾಸಕರ ನೇತೃತ್ವದಲ್ಲಿ ತಯಾರಿ ನಡೆಯುತ್ತಿದ್ದು, ಸ್ಥಳೀಯ ಸಾಮಾಜಿಕ ಮುಂದಾಳುಗಳು ಸಾಥ್ ನೀಡಲಿದ್ದಾರೆ.
ಓಟದ ಕೋಣಗಳಿಗೆ ಅನುಕೂಲವಾಗುವಂತೆ ಕರಾವಳಿಯಿಂದಲೇ ನೀರು, ಬೈಹುಲ್ಲು, ಹುರುಳಿಯನ್ನು ಬೆಂಗಳೂರಿಗೆ ಕೊಂಡೊಯ್ಯಲಾಗುತ್ತದೆ. ನೂರಕ್ಕೂ ಹೆಚ್ಚು ಲಾರಿಗಳು ಸಾಲಾಗಿ ಕರಾವಳಿಯ ಸಾಂಸ್ಕೃತಿಕ ಮೆರುಗನ್ನು ಹೊತ್ತು ರಾಜಧಾನಿಯತ್ತ ಸಾಗಲಿವೆ.
ಗುರುವಾರ ಮಧ್ಯಾಹ್ನ 2 ಗಂಟೆಯಿಂದ ಐದು ಗಂಟೆಯ ತನಕ ವಿರಾಮ ನೀಡಲಾಗಿದೆ. ಅಲ್ಲಿ ಮಾಜಿ ಸಚಿವ ಎಚ್ ಡಿ ರೇವಣ್ಣ ನೇತೃತ್ವದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನದ ಊಟೋಪಚಾರವೂ ಇಲ್ಲೇ ನಡೆಯಲಿದೆ. ಈ ವೇಳೆ ಕೋಣಗಳನ್ನು ಲಾರಿಯಿಂದ ಇಳಿಸಿ ವಿಶ್ರಾಂತಿ ನೀಡಲಾಗುವುದು.
ಸಂಜೆ ಐದು ಗಂಟೆಯಿಂದ ಹಾಸನದಿಂದ ಹೊರಟ ಕೋಣಗಳಿಗೆ ಚನ್ನರಾಯಪಟ್ಟಣದಲ್ಲಿ ಸ್ವಾಗತ ನೀಡಲಾಗುವುದು. ಬಳಿಕ ನೆಲಮಂಗಲ ಬೆಂಗಳೂರು ಪ್ರವೇಶಿಸಿ ಸುಮಾರು 11 ಗಂಟೆಗೆ ಅರಮನೆ ಮೈದಾನಕ್ಕೆ ಆಗಮಿಸಲಿದೆ.
ಈಗಾಗಲೇ 179 ಜೋಡಿ ಕೋಣಗಳ ಯಜಮಾನರು ಬೆಂಗಳೂರು ಕಂಬಳಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ನೇಗಿಲು ಕಿರಿಯ ವಿಭಾಗದಲ್ಲಿ ಕಕ್ಯಪದವು ಕಂಬಳದಲ್ಲಿ ಅವುಗಳ ಓಟವನ್ನು ಪರಿಶೀಲಿಸಿ ಪರಿಷ್ಕರಣೆ ಮಾಡಲಾಗುತ್ತಿದೆ.