ಶ್ರೀನಗರ : ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಗಡಿ ಭದ್ರತಾ ಪಡೆಯ ಯೋಧನೊಬ್ಬ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಬುಧವಾರ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ನಿಯೋಜಿಸಲಾದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಹೆಡ್ ಕಾನ್ಸ್ಟೆಬಲ್ ರಾಜೇಂದ್ರ ಯಾದವ್ (28) ಆತ್ಮಹತ್ಯೆಗೆ ಶರಣಾದ ಯೋಧ.
ಯೋಧ ರಾಜೇಂದ್ರ ಯಾದವ್ ಕಳೆದ ಎಂಟು ತಿಂಗಳ ಹಿಂದೆಯಷ್ಟೇ ರಾಜಸ್ಥಾನದ ಕೊಟ್ಪುಟ್ಲಿ-ಬೆಹ್ರೋರ್ ಜಿಲ್ಲೆಯ ಧೀರ್ಪುರ ಗ್ರಾಮದ ನಿವಾಸಿ ಅಂಶು ಯಾದವ್ ಅವರನ್ನು ಮದುವೆಯಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಜಗಳವಾಗುತ್ತಿತ್ತು ಎನ್ನಲಾಗಿದೆ.
ಈ ನಡುವೆ ಕರ್ತವ್ಯಕ್ಕೆ ಹಾಜರಾಗಿದ್ದ ರಾಜೇಂದ್ರ ಯಾದವ್ ದಿನ ಪತ್ನಿ ಜೊತೆ ಕರೆ ಮಾಡಿ ಮಾತನಾಡುತ್ತಿದ್ದ ಆದರೆ ಬುಧವಾರ ಕರೆ ಮಾಡಿದ ಸಂದರ್ಭ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿದೆ ಇದು ಗಂಭೀರ ಸ್ಥಿತಿಗೆ ತಲುಪಿತ್ತು ಎನ್ನಲಾಗಿದೆ ಜಗಳದಿಂದ ಮುನಿಸಿಕೊಂಡ ಪತ್ನಿ ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆದರೆ ಪತಿಗೆ ಪತ್ನಿ ಸಿಟ್ಟಲ್ಲಿ ಈ ರೀತಿ ಮಾಡುತ್ತಾಳೆ ಎಂಬ ಆಲೋಚನೆ ಇದ್ದಿರಲಿಕ್ಕಿಲ್ಲ ಸ್ವಲ್ಪ ಸಮಯದ ಬಳಿಕ ರಾಜೇಂದ್ರ ಯಾದವ್ ಮೊಬೈಲ್ ಗೆ ಕರೆಯೊಂದು ಬಂದಿದ್ದು ಈ ಕರೆಯಲ್ಲಿ ರಾಜೇಂದ್ರ ಯಾದವ್ ಪತ್ನಿ ಅಂಶು ಯಾದವ್ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಗೊತ್ತಾಗಿದೆ. ಪತ್ನಿಯ ಸಾವಿನ ಸುದ್ದಿ ಕೇಳುತ್ತಲೇ ಆಘಾತಕ್ಕೆ ಒಳಗಾದ ಯೋಧ ತನ್ನ ಬಳಿ ಇದ್ದ ಸರ್ವಿಸ್ ರಿವಾಲ್ವರ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಅತ್ತ ರಾಜಸ್ತಾನದಲ್ಲಿ ಅಂಶು ಯಾದವ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕುಟುಂಬಸ್ಥರಿಗೆ ದೇಹವನ್ನು ಹಸ್ತಾಂತರಿಸಿದ್ದು ಇತ್ತ ರಾಜೇಂದ್ರ ಯಾದವ್ ಅವರ ಪಾರ್ಥಿವ ಶರೀರವನ್ನು ಗುರುವಾರ ಜೈಪುರಕ್ಕೆ ತರುವ ಸಾಧ್ಯತೆ ಇದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.