ಬೆಂಗಳೂರು, ಸೆ. 29: ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಇಂದು ಕರ್ನಾಟಕ ಬಂದ್ ಆಚರಿಸಲಾಗುತ್ತಿದ್ದು, ರಾಜ್ಯದ ವಿವಿದೆಡೆ ಹಲವು ಸಂಘಟನೆಗಳು ರಸ್ತೆಗಳಿದು ಪ್ರತಿಭಟನೆ ಮಾಡುತ್ತಿವೆ. ಇನ್ನು ಈ ಕರ್ನಾಟಕ ಬಂದ್ ಬಿಸಿ ವಿಮಾನಗಳಿಗೂ ತಟ್ಟಿದೆ. ಇಂದು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸುವ ಮತ್ತು ನಿರ್ಗಮಿಸುವ ವಿಮಾನಗಳು ರದ್ದಾಗಿವೆ. ಪ್ರಯಾಣಿಕರು ಇಲ್ಲದ ಕಾರಣ ಒಟ್ಟು 44 ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ದೆಹಲಿ, ಮುಂಬೈ, ಕೊಲ್ಕತ್ತಾ ಮಂಗಳೂರು ಸೇರಿದಂತೆ ವಿವಿದೆಡೆಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಒಟ್ಟು 22 ವಿಮಾನಗಳು ರದ್ದಾಗಿವೆ. ಇನ್ನು ಬೆಂಗಳೂರಿನಿಂದ ವಿವಿದೆಡೆಗೆ ಹೋಗಬೇಕಿದ್ದ 22 ವಿಮಾನಗಳ ಹಾರಾಟ ಸ್ಥಗಿತಗೊಂಡಿವೆ.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಆಟೋ, ಕ್ಯಾಬ್, ಓಲಾ, ಊಬರ್ ಸಂಚಾರ ಇಲ್ಲ. ಹೀಗಾಗಿ ಜನರ ಓಡಾಟ ವಿರಳವಾಗಿದ್ದು, ಬಂದ್ಗೆ ಕರೆ ಕೊಟ್ಟಿದ್ದರಿಂದ ಯಾರು ಇಂದಿನ ದಿನಕ್ಕೆ ಪ್ಲೈಟ್ ಬುಕ್ ಮಾಡಿಲ್ಲ. ಇನ್ನೂ ಕೆಲವರು ಬುಕ್ ಮಾಡಿದ್ದರೂ ವಿಮಾನ ನಿಲ್ದಾಣಕ್ಕೆ ಹೋಗಲು ವಾಹನಗಳು ಇಲ್ಲದಿದ್ದರಿಂದ ಫ್ಲೈಟ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ.
ಇನ್ನು ಬೇರೆ ಬೇರೆ ಕಡೆಗಳಿಂದ ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳು ಸಹ ರದ್ದಾಗಿವೆ. ಕರ್ನಾಟಕ ಬಂದ್ ಸಂದರ್ಭದಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರೆ, ಇಲ್ಲಿಂದ ಬೇರೆ ಕಡೆ ಹೋಗಲು ಯಾವುದೇ ಕ್ಯಾಬ್ಗಳು ಇಲ್ಲ. ಇದನ್ನು ಅರಿತ ಪ್ರಯಾಣಿಕರು ಇಂದಿನ ಬೆಂಗಳೂರು ಪ್ರವಾಸವನ್ನೂ ಸಹ ರದ್ದುಗೊಳಿಸಿದ್ದಾರೆ. ಇದರಿಂದ ಪ್ರಯಾಣಿಕರಿಲ್ಲದೇ ಒಟ್ಟು 44 ವಿಮಾನಗಳು ರದ್ದುಗೊಂಡಿವೆ.