ಲಕ್ನೋ: ಅಯೋಧ್ಯೆ ರಾಮ ಮಂದಿರದ ನೆಲ ಮಹಡಿಯ ನಿರ್ಮಾಣ ಕಾಮಗಾರಿ ಡಿಸೆಂಬರ್ ಅಂತ್ಯಕ್ಕೆ ಮುಕ್ತಾಯವಾಗಲಿದ್ದು, ಜನವರಿ 22 ರಂದು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುವ ನಿರೀಕ್ಷೆ ಇದೆ ಎಂದು ದೇವಾಲಯ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.
ಮುಂದಿನ ವರ್ಷ ಜನವರಿ 20 ರಿಂದ 24 ರ ನಡುವೆ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಪ್ರತಿಷ್ಠಾಪನೆಯ ಅಂತಿಮ ದಿನಾಂಕವನ್ನು ಮೋದಿ ಅವರಿಗೆ ಇನ್ನೂ ತಿಳಿಸಬೇಕಿದೆ ಎಂದು ಹೇಳಿದ್ದಾರೆ.
ಜನವರಿ 14 ರಂದು ಮಕರ ಸಂಕ್ರಾಂತಿಯ ನಂತರ ರಾಮಲಲ್ಲಾನ ಪವಿತ್ರೀಕರಣವನ್ನು ಪ್ರಾರಂಭಿಸಲು ಮಂದಿರ ಟ್ರಸ್ಟ್ ನಿರ್ಧರಿಸಿದೆ. ಅದರ ನಂತರ ರಾಮಲಲ್ಲಾನ ‘ಪ್ರಾಣ ಪ್ರತಿಷ್ಠಾಪನಾ’ 10 ದಿನಗಳ ಆಚರಣೆ ನಡೆಯಲಿದೆ.
ಜೂನ್ನಲ್ಲಿ ರಾಮ ಮಂದಿರ ಟ್ರಸ್ಟ್ ಸದಸ್ಯ ಮಿಶ್ರಾ ಅವರು, ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯ ನಂತರ ಮುಂದಿನ ವರ್ಷ ಜನವರಿ 24 ರಂದು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಭಕ್ತರಿಗೆ ತೆರೆಯುವ ಸಾಧ್ಯತೆಯಿದೆ ಎಂದು ಹೇಳಿದರು.