ಚಿತ್ರದುರ್ಗ, ಸೆ.24: ನದಿ ಆಧಾರಿತ ನೀರು ನಿರ್ವಹಣೆ ಕಾನೂನನ್ನು ಜಾರಿಗೆ ತರಬೇಕು. ಆ ಮೂಲಕ ಕಾವೇರಿ, ಕೃಷ್ಣ, ಮಹದಾಯಿ ಯೋಜನೆಗೆ ಶಾಶ್ವತ ಮುಕ್ತಿ ಸಿಗಬೇಕು. ಈ ವಿಚಾರವಾಗಿ ತರಳಬಾಳು ಶ್ರೀಗಳ ಜೊತೆ ಚರ್ಚಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹೇಳಿದರು.
ಕರ್ನಾಟಕ ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನದಿ ನೀರು ವಿವಾದ ಭುಗಿಲೆದ್ದಿದ್ದು, ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಈ ಬಗ್ಗೆ ಚಿತ್ರದುರ್ಗ ತಾಲೂಕಿನ ಸಿರಿಗೆರೆ ಗ್ರಾಮದಲ್ಲಿ ನಡೆದ ತರಳುಬಾಳು ಮಠದ ಶಿವಕುಮಾರ ಶ್ರೀ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ, ಅಂತಾರಾಜ್ಯ ನದಿ ವಿವಾದಗಳ ಕಾನೂನಿನಿಂದ ಯಾವುದೇ ಇತ್ಯರ್ಥ ಆಗಿಲ್ಲ. ವಿವಾದ ಬಗೆಹರಿಸುವುದಕ್ಕಿಂತ ವಿವಾದ ಹುಟ್ಟುಹಾಕುತ್ತಿದೆ ಎಂದರು.
55 ವರ್ಷ ಕಳೆದರೂ ಒಂದು ವಿವಾದ ಕೂಡ ಬಗೆಹರೆದಿಲ್ಲ. ಕಾಲ ಬದಲಾದಂತೆ ನೀರಿನ ಬಳಕೆ ಪ್ರಮಾಣ ಕೂಡ ಬದಲಾಗುತ್ತಿದೆ. ಕೃಷಿ, ಕುಡಿಯುವ ನೀರಿನ ವಲಯದಲ್ಲಿ ವ್ಯತ್ಯಾಸವಿದೆ. ಬೇಸಾಯ ಹಾಗೂ ಕೈಗಾರಿಕೆಗೆ ನೀರಿನ ಬಳಕೆಯಲ್ಲಿ ಸಂಘರ್ಷವಿದೆ ಎಂದರು. ಬೆಂಗಳೂರು ನಗರಕ್ಕೆ ಇಂದು 25 ಟಿಎಂಸಿ ನೀರಿನ ಅಗತ್ಯವಿದೆ ಅಂತಾನೂ ಹೇಳಿದರು.