ಉಡುಪಿ, ಸೆ.18: ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಟಿಕೆಟ್ ಕೊಡಿಸುವ ನೆಪದಲ್ಲಿ ವಂಚನೆ ಎಸಗಿದ ಆರೋಪದಡಿ ಬಂಧನಕ್ಕೊಳಗಾಗಿ ಸಿಸಿಬಿ ವಿಚಾರಣೆ ಎದುರಿಸುತ್ತಿರುವ ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ವಂಚನೆ ಆರೋಪ ಕೇಳಿಬಂದಿದೆ. ಬಟ್ಟೆ ಅಂಗಡಿ ಇಟ್ಟು ಕೊಡುವುದಾಗಿ ಲಕ್ಷಾಂತರ ರೂಪಾಯಿ ಪಡೆದ ವಂಚಿಸಿದ ಆರೋಪ ಸಂಬಂಧ ಉಡುಪಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಟ್ಟೆ ಅಂಗಡಿ ಇಟ್ಟು ಕೊಡುವುದಾಗಿ 5 ಲಕ್ಷ ರೂ. ಪಡೆದು ವಂಚನೆ ಎಸಗಿದ್ದಾಗಿ ಆರೋಪಿಸಿ ಬಿಜೆಪಿ ಕಾರ್ಯಕರ್ತ ಸುಧೀನ್ ಎಂಬುವರು ಬ್ರಹ್ಮಾವರ ವೃತ್ತ ವ್ಯಾಪ್ತಿಯ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಹಿಂದೂ ಕಾರ್ಯಕರ್ತರೇ ಚೈತ್ರಾ ಕುಂದಾಪುರಳ ಟಾರ್ಗೆಟ್?
ಚೈತ್ರಾ ಕುಂದಾಪುರ ಹಿಂದುತ್ವ, ಕೇಸರಿಯನ್ನೇ ಬಂಡವಾಳವನ್ನಾಗಿಸಿಕೊಂಡು ಕಾರ್ಯಕರ್ತರನ್ನೇ ವಂಚಿಸುತ್ತಿದ್ದರೇ ಎಂಬ ಅನುಮಾನಕ್ಕೆ ಸದ್ಯ ದಾಖಲಾದ ಪ್ರಕರಣಗಳೇ ಪುಷ್ಠಿ ನೀಡುತ್ತವೆ. ಬೈಂದೂರಿನ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ ಚೈತ್ರಾ ಆ್ಯಂಡ್ ಗ್ಯಾಂಗ್ ಐದು ಕೋಟಿ ಪಡೆದು ನಂತರ ವಂಚಿಸಿದೆ.
ಈ ನಡುವೆ ಮತ್ತೊಂದು ವಂಚನೆ ಪ್ರಕರಣ ದಾಖಲಿಸಿದ ಸುಧೀನ್ ಬಿಜೆಪಿ ಕಾರ್ಯಕರ್ತ ಬಟ್ಟೆ ಅಂಗಡಿ ಉದ್ಯಮ ನಡೆಸಲು ನಿರ್ಧರಿಸಿದ್ದಾರೆ. ಆದರೆ ಇವರಿಗೂ ಚೈತ್ರಾ ಕುಂದಾಪುರ ಐದು ಲಕ್ಷ ವಂಚಿಸಿದ್ದಾರೆ ಎಂಬುದು ಇದೀಗ ಬೆಳಕಿಗೆ ಬಂದಿದೆ.