ತಮಿಳು ಚಿತ್ರೋದ್ಯಮದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಹೆಸರಾಂತ ನಟ ಧನುಷ್ ಸೇರಿದಂತೆ ನಾಲ್ವರು ಸ್ಟಾರ್ ನಟರಿಗೆ ಅಲ್ಲಿನ ನಿರ್ಮಾಪಕರ ಸಂಘವು ರೆಡ್ ಕಾರ್ಡ್ ನೀಡಿದ್ದು, ನಿರ್ಮಾಪಕರಿಗೆ ಇವರು ಅಪಾರ ಹಾನಿಯನ್ನಿಂಟು ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ನಿಷೇಧದ ಕಠಿಣ ಕ್ರಮಕ್ಕೆ ಮುಂದಾಗಿದೆ.
ಎರಡು ದಿನಗಳ ಹಿಂದೆ ನಡೆದ ನಿರ್ಮಾಪಕರ ಸಂಘದ ಸಭೆಯಲ್ಲಿ ವಿಶಾಲ್, ಧನುಷ್, ಅಥರ್ವ್ ಮತ್ತು ಸಿಂಬುಗೆ ರೆಡ್ ಕಾರ್ಡ್ ನೀಡಿದ್ದು, ಕಠಿಣ ಕ್ರಮದ ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ನಾಲ್ವರು ಕಲಾವಿದರು ನಿರ್ಮಾಪಕರಿಂದ ಹಣ ಪಡೆದುಕೊಂಡು ಮೋಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಕಳೆ ಕೆಲವು ತಿಂಗಳ ಹಿಂದೆ ಚೆನ್ನೈನ ಅಣ್ಣಾಸಾಲೈನಲ್ಲಿ ನಡೆದ ನಿರ್ಮಾಪಕರ ಹಾಗೂ ಕಲಾವಿದರ ಸಂಘದ ಸಭೆಯಲ್ಲಿ ಅನೇಕ ನಿರ್ಮಾಪಕರು ಕಲಾವಿದರ ಮೇಲೆ ಆರೋಪ ಮಾಡಿದ್ದರು. ಅದರಲ್ಲೂ ಪ್ರಮುಖವಾಗಿ ಧನುಷ್, ರಾಯ್ ಲಕ್ಷ್ಮಿ , ಅಮಲಾ ಪೌಲ್ ವಿರುದ್ಧವೂ ದೂರು ದಾಖಲಾಗಿತ್ತು.
ತೇನಾಂಡಾಲ್ ಫಿಲ್ಮ್ ಸಂಸ್ಥೆಯು ಧನುಷ್ ಗಾಗಿ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದೆ. ಒಂದು ತಿಂಗಳ ಕಾಲ ಶೂಟಿಂಗ್ ಕೂಡ ನಡೆದಿದೆ. ಕಾರಣಾಂತರಗಳಿಂದ ಶೂಟಿಂಗ್ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಶೂಟಿಂಗ್ ಮಾಡುವಂತೆ ಧನುಷ್ ಗೆ ಮನವಿ ಮಾಡಲಾಗಿದೆ. ಆದರೆ, ಅವರು ಸ್ಪಂದಿಸುತ್ತಿಲ್ಲ ಎಂದು ದೂರಿನಲ್ಲಿದೆ. ಈ ಸಿನಿಮಾಗಾಗಿ ಸಂಸ್ಥೆಯು 20 ಕೋಟಿ ರೂಪಾಯಿಯನ್ನು ಧನುಷ್ ಗೆ ನೀಡಿದೆಯಂತೆ.
ಕಾಲ್ ಶೀಟ್ ನೀಡದೇ ಇರುವುದು ಒಂದು ಸಮಸ್ಯೆಯಾದರೆ, ಕೆಲ ನಟಿಯರು ಚಿತ್ರೀಕರಣಕ್ಕೆ ಬಂದರೆ, ಅವರಿಗೆ ಹತ್ತು ಜನ ಸೆಕ್ಯೂರಿಟಿ ಗಾರ್ಡ್ ಗಳು ಬೇಕೆಂದು ಹೇಳುತ್ತಾರಂತೆ. ಇದರಿಂದಾಗಿ ಭಾರೀ ಮೊತ್ತದ ಹಣವನ್ನೇ ಸಂಸ್ಥೆಯು ನೀಡಬೇಕಾಗಿದೆ. ಇದನ್ನು ತಪ್ಪಿಸುವಂತೆ ಫಿಲ್ಮ್ ಚೇಂಬರ್ ಗೆ ಕೆಲವು ನಿರ್ಮಾಪಕರು ಪತ್ರ ಬರೆದಿದ್ದಾರೆ. ಸೆಕ್ಯೂರಿಟಿ ಬೇಕಾದ ನಟಿಯರು ತಾವೇ ದುಡ್ಡು ಕೊಟ್ಟ ನೇಮಿಸಿಕೊಳ್ಳಲಿ ಎನ್ನುವುದು ನಿರ್ಮಾಪಕರ ವಾದವಾಗಿತ್ತು.