ದೆಹಲಿ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಈ ತಿಂಗಳ ಆರಂಭದಲ್ಲಿ ಘೋಷಿಸಿದ ಸಂಸತ್ನ ವಿಶೇಷ ಅಧಿವೇಶನಕ್ಕೆ ಒಂದು ದಿನ ಮುಂಚಿತವಾಗಿ ಅಂದರೆ ಭಾನುವಾರ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಸರ್ವಪಕ್ಷ ಸಭೆಯಲ್ಲಿ ವಿಶೇಷ ಅಧಿವೇಶನದ ಅಜೆಂಡಾ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ವಿಶೇಷ ಅಧಿವೇಶನವು ಸಂಸತ್ ನ ಹಳೆಯ ಕಟ್ಟಡದಲ್ಲಿ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 19 ರಂದು ಹೊಸ ಕಟ್ಟಡಕ್ಕೆ ತೆರಳಲಿದೆ ಎಂದು ಮೂಲಗಳು ತಿಳಿಸಿವೆ.
ಇದೇ ಸೆಪ್ಟೆಂಬರ್ 18 ರಿಂದ ಆರಂಭವಾಗಲಿರುವ ವಿಶೇಷ ಅಧಿವೇಶನದ ಪೂರ್ವಭಾವಿಯಾಗಿ ಸಪ್ಟೆಂಬರ್ 17 ರಂದು ಸಂಜೆ 4.30 ಕ್ಕೆ ಸರ್ವ ಪಕ್ಷಗಳ ನಾಯಕರ ಸಭೆಯನ್ನು ಕರೆಯಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣಗಳ ಖಾತೆ ಮೂಲಕ ಈ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವರು ವಿಶೇಷ ಅಧಿವೇಶನದ ಹಿನ್ನಲೆಯಲ್ಲಿ ಕರೆಯಲಾಗಿರುವ ಈ ಸರ್ವಪಕ್ಷ ಸಭೆಯ ಕುರಿತು ಎಲ್ಲಾ ಪಕ್ಷಗಳ ನಾಯಕರಿಗೂ ಈಗಾಗಲೇ ಈ-ಮೇಲ್ ಮೂಲಕ ಮಾಹಿತಿ ನೀಡಿ, ಆಮಂತ್ರಣ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಜೆಂಡಾದಲ್ಲಿ ಸ್ಪಷ್ಟತೆಯ ಕೊರತೆಯಿಂದಾಗಿ ವಿಶೇಷ ಅಧಿವೇಶನ ಘೋಷಣೆಯನ್ನು ವಿರೋಧ ಪಕ್ಷದ ನಾಯಕರು ವ್ಯಾಪಕವಾಗಿ ಟೀಕಿಸಿದ್ದಾರೆ. ಭಾರತದ ಪ್ರಮುಖ ಹಬ್ಬ ಗಣೇಶ ಚತುರ್ಥಿಯ ದಿನವೇ ಅಧಿವೇಶನ ಕರೆದಿದ್ದಕ್ಕಾಗಿ ಬಿಜೆಪಿ ವಿರುದ್ಧ ವಿಪಕ್ಷ ಟೀಕಾಪ್ರಹಾರ ಮಾಡಿದೆ.
ಭಾರತದ ಪ್ರಮುಖ ಹಬ್ಬವಾದ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಕರೆಯಲಾದ ಈ ವಿಶೇಷ ಅಧಿವೇಶನವು ದುರದೃಷ್ಟಕರ ಮತ್ತು ಹಿಂದೂ ಭಾವನೆಗಳಿಗೆ ವಿರುದ್ಧವಾಗಿದೆ. ದಿನಾಂಕಗಳ ಆಯ್ಕೆಯಲ್ಲಿ ಆಶ್ಚರ್ಯವಾಯಿತ ಎಂದು ಶಿವಸೇನಾ ಯುಬಿಟಿಯ ಪ್ರಿಯಾಂಕಾ ಚತುರ್ವೇದಿ ಹೇಳಿದ್ದು, ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆ ದಿನಾಂಕ ಮರುಹೊಂದಿಸಬೇಕೆಂದು ಒತ್ತಾಯಿಸಿದರು.
ನಮ್ಮಲ್ಲಿ ಯಾರಿಗೂ ಅದರ ಕಾರ್ಯಸೂಚಿಯ ಬಗ್ಗೆ ಯಾವುದೇ ಕಲ್ಪನೆಯಿಲ್ಲ. ಎಲ್ಲಾ ಐದು ದಿನಗಳನ್ನು ‘ಸರ್ಕಾರಿ ವ್ಯವಹಾರ’ಕ್ಕಾಗಿ ಮೀಸಲಿಡಲಾಗಿದೆ ಎಂದು ಪ್ರಧಾನಿಗೆ ಪತ್ರ ಬರೆದಿರುವ ಸೋನಿಯಾ ಮಣಿಪುರ ವಿಷಯ, ಕೋಮುವಾದದ ಹರಡುವಿಕೆ ಮತ್ತು ಚೀನಾದೊಂದಿಗೆ ದೀರ್ಘಕಾಲದ ಗಡಿ ಸಂಘರ್ಷ, ಬೀಜಿಂಗ್ನ ಹೊಸ ನಕ್ಷೆ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸುವಂತೆ ಒತ್ತಾಯಿಸಿದ್ದಾರೆ.
ವಿಶೇಷ ಅಧಿವೇಶನದ ಅಜೆಂಡಾ ಏನು?
ಅಧಿವೇಶನದ ಕಾರ್ಯಸೂಚಿಯು ಅಮೃತ್ ಕಾಲ್ ಮತ್ತು ಭಾರತವನ್ನು ‘ಅಭಿವೃದ್ಧಿ ಹೊಂದಿದ ರಾಷ್ಟ್ರ’ ಕುರಿತು ಚರ್ಚೆಗಳನ್ನು ಒಳಗೊಂಡಿರಬಹುದು ಎಂದು ಸರ್ಕಾರದ ಮೂಲಗಳು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಇತರ ಸಂಭಾವ್ಯ ವಿಷಯಗಳು ಚಂದ್ರಯಾನ-3, ಭಾರತದ ಯಶಸ್ವಿ ಚಂದ್ರನ ಮಿಷನ್ ಮತ್ತು ಸೆಪ್ಟೆಂಬರ್ 8 ಮತ್ತು 10 ರ ನಡುವೆ ದೆಹಲಿಯಲ್ಲಿ ನಡೆದ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟ G20 ಶೃಂಗಸಭೆಯನ್ನು ಒಳಗೊಂಡಿರಬಹುದು ಎಂದು ಹೇಳಲಾಗುತ್ತದೆ.
ದೇಶದ ಹೆಸರನ್ನು ಭಾರತ್ ಎಂದು ಮರುನಾಮಕರಣ ಮಾಡುವ ಸಾಧ್ಯತೆ ಇದೆ ಎಂಬ ವದಂತಿಯಿಂದಾಗಿ ಭಾರಿ ಗದ್ದಲದ ನಂತರ ಅಧಿವೇಶನವು ನಡೆಯಲಿದೆ.