ಉಡುಪಿ : ಶ್ರೀ ಕೃಷ್ಣ, ಮಹಾಕಾಳಿ -ಕೊಲ್ಲೂರು ಮೂಕಾಂಬಿಕೆ ಇರುವ ನಾಡು ಉಡುಪಿ. ದಸರಾದಲ್ಲಿ ದೇವಿಯರನ್ನು ನಾವು ಆರಾಧನೆ ಮಾಡುತ್ತೇವೆ. ಮಹಿಷಾ ದಸರಾ ಮೂಲಕ ನಮ್ಮ ನಂಬಿಕೆಯನ್ನು ಪ್ರಶ್ನೆ ಮಾಡುವ ಶಕ್ತಿಗಳು ಹುಟ್ಟಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವೆ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ನಮ್ಮ ನಂಬಿಕೆ ನಮ್ಮದು ದೇಶದಲ್ಲಿ ಎಲ್ಲರಿಗೂ ಅವಕಾಶ ಇದೆ. ಆಸ್ತಿಕರಿಗೂ ನಾಸ್ತಿಕರಿಗೂ ನಮ್ಮ ದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸಬಹುದು. ವಿಕೃತವಾದ ಮಹಿಷಾ ದಸರಾದಿಂದ ಹಿಂದುಗಳ ಭಾವನೆಗೆ ಧಕ್ಕೆಯಾಗುತ್ತದೆ ಎಂದರು. ಯಾವ ಆಧಾರದಲ್ಲಿ ಮಹಿಷಾ ದಸರಾ ಆಚರಣೆ ಮಾಡುತ್ತೀರಿ ಗೊತ್ತಿಲ್ಲ, ಇದರ ಹಿಂದೆ ಇರುವ ಶಕ್ತಿ ಯಾವುದು ಗೊತ್ತಿಲ್ಲ.. ಆದರೆ ಉಡುಪಿ ಎಂಬ ಧಾರ್ಮಿಕ ಜಿಲ್ಲೆಯಲ್ಲಿ ಮಹಿಷಾ ದಸರ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಮಾನಸಿಕತೆಯನ್ನು ಜಿಲ್ಲೆಯ ಜನ ಅರ್ಥ ಮಾಡಿಕೊಳ್ಳುತ್ತಾರೆ. ನಿಮ್ಮ ವಿಕೃತಿಯನ್ನು ನಿಲ್ಲಿಸಿ ಆಸ್ತಿಕರ ನಂಬಿಕೆಗೆ ಬೆಲೆಕೊಡಿ. ದೇವಿ ದುಷ್ಟರನ್ನು ರಾಕ್ಷಸರನ್ನು ಸಂಹಾರ ಮಾಡಿದವಳು ಎಂಬ ನಂಬಿಕೆಯಿದೆ. ದುಷ್ಟರ ಸಂಹಾರ ಮಾಡಲು ನಿಮಗೆ ಏನು ಸಮಸ್ಯೆ ಆಗಿದೆ ನನಗೆ ಅರ್ಥವಾಗುತ್ತಿಲ್ಲ. ಮಹಿಷಾ ದಸರ ಮಾಡುವವರು ಮರು ಚಿಂತನೆ ಮಾಡಿ ಎಂದು ಶೋಭಾ ಕರಂದ್ಲಾಜೆ ಹೇಳಿದರು.