ಕೊಲ್ಕತ್ತ:ಸಾರ್ವಜನಿಕ ಗಣಪತಿಗಳು ಚಮತ್ಕಾರ ಪ್ರದರ್ಶನ ಮಾಡದಿದ್ದರೆ ಹೇಗೆ? ಮನೆಮಂದಿ ಮಕ್ಕಳನ್ನು ಕರೆದುಕೊಂಡು ದೂರ ಪ್ರಯಾಣಿಸಿದ್ದಕ್ಕೆ ಏನಾದರೂ ಬೆರಗು, ಪುಳಕ, ಖುಷಿ ಅನುಭವವನ್ನು ಆ ಗಣಪ ಕೊಡಲೇಬೇಕು. ಕೊಲ್ಕತ್ತದ ಉಲ್ಟಾಡಾಂಗನ ನಾಗರಕಲ್ಲು ಮಾರ್ಕೆಟ್ಟಿನಲ್ಲಿ ಪ್ರತಿಷ್ಠಾಪಿಸಿರುವ ಈ ಗಣಪ, ಭಕ್ತಾದಿಗಳು ಪಾದ ಮುಟ್ಟುತ್ತಿದ್ದಂತೆ ಎದ್ದುನಿಂತು ಆಶೀರ್ವದಿಸುತ್ತಾನೆ. ನೆಟ್ಟಿಗರು ಈ ಸೋಜಿಗವನ್ನು ಬೆರಗಿನಿಂದ ನೋಡುತ್ತಿದ್ದಾರೆ.
‘ಪ್ರತೀ ವರ್ಷ ಹೊಸ ರೀತಿಯಲ್ಲಿ ಗಣಪನನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುತ್ತೇವೆ. ಒಂದು ರಾತ್ರಿ ಮಲಗಿರುವಾಗ ಈ ರೀತಿ ಗಣಪತಿಯನ್ನು ಚಮತ್ಕಾರಿಕವಾಗಿ ರೂಪಿಸಬೇಕು ಎಂಬ ಆಲೋಚನೆ ಮನಸಿಗೆ ಬಂದಿತು.ಇಲ್ಲಿ ಜಗನ್ನಾಥ ಪುರಿ ಶೈಲಿಯಲ್ಲಿ ಮಂಟಪವನ್ನು ತಯಾರುಮಾಡಲಾಗಿದೆ’ ಎಂದಿದ್ದಾರೆ ಪೂಜಾ ಸಮಿತಿಯ ಸದಸ್ಯರೊಬ್ಬರು.
ಮೂರ್ತಿಯಂತೆ ಸುಮ್ಮನೇ ಕುಳಿತುಕೊಳ್ಳುವುದನ್ನು ಬಿಟ್ಟು ಈ ಗಣಪ, ಪಾದ ಮುಟ್ಟಿದ ಪ್ರತಿಯೊಬ್ಬರಿಗೂ ಆಶೀರ್ವದಿಸುವ ರೀತಿ ನಿಜಕ್ಕೂ ಆಪ್ತ ಮತ್ತು ಸಂವೇದನಾಶೀಲ ಎನ್ನಿಸಿದೆ. ಈ ಗಣಪತಿಯ ಚಮತ್ಕಾರ ನೋಡಲು ಜನಸಾಗರವು ಹರಿದುಬರುತ್ತಿದೆ.