ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಕೋಟಿ ಕೋಟಿ ವಂಚಿಸಿ ಅರೆಸ್ಟ್ ಆಗಿರುವ ಚೈತ್ರಾ ಕುಂದಾಪುರ ಬಂಧನಕ್ಕೂ ಮುನ್ನ ಸಿಸಿಬಿಗೆ ಚಳ್ಳೆಹಣ್ಣು ತಿನ್ನಿಸಲು ಭಾರೀ ಪ್ರಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ. ಪೊಲೀಸರು ತನ್ನ ಮೇಲೆ ಕಣ್ಣಿಟ್ಟಿದ್ದಾರೆ ಎಂದು ತಿಳಿದ ಕೂಡಲೇ ತಪ್ಪಿಸಿಕೊಳ್ಳಲು ತೊಡಕಾಗುತ್ತದೆ ಎಂದು ತನ್ನ ಕಾರನ್ನೇ ಮುಚ್ಚಿಟ್ಟಿರುವ ವಿಚಾರ ಈಗ ಬಯಲಾಗಿದೆ.
ಪ್ರಕರಣದ ಎ1 ಆರೋಪಿ ಚೈತ್ರಾ ತನ್ನ ಬಂಧನಕ್ಕೆ ಕಾರಿನ ನಂಬರ್ನ್ನು ಪೊಲೀಸರು ಟ್ರೇಸ್ ಮಾಡುತ್ತಾರೆ. ಇದರಿಂದ ತಾನು ಸುಲಭವಾಗಿ ಸಿಕ್ಕಿ ಬೀಳುತ್ತೇನೆ ಎಂಬುದನ್ನು ಸರಿಯಾಗಿ ಅರಿತಿದ್ದಳು. ಇದೇ ಕಾರಣಕ್ಕೆ ಕಾರನ್ನೇ ಮುಚ್ಚಿಟ್ಟರೆ ಸುಲಭವಾಗಿ ಹಿಡಿಯಲು ಸಾಧ್ಯವಿಲ್ಲ ಎಂದು ಕಾರನ್ನು ಬಾಗಲಕೋಟೆಯ ಮುದೋಳದ ಹಳ್ಳಿಯೊಂದರಲ್ಲಿ ಮುಚ್ಚಿಟ್ಟಿದ್ದಳು. ಬಳಿಕ ಅಲ್ಲಿಂದ ಸ್ನೇಹಿತರ ಸಹಾಯದಿಂದ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ತಲೆಮರೆಸಿಕೊಂಡು ಕೆಎಸ್ಆರ್ಟಿಸಿ ಬಸ್ ಮೂಲಕ ಬೇರೆಡೆಗೆ ತೆರಳಿದ್ದಳು.
ಇನ್ನೂ ಪ್ರಕರಣದ ಮೂರನೇ ಆರೋಪಿ ಆಗಿರುವ ಅಭಿನವ ಹಾಲಶ್ರೀ ಸ್ವಾಮೀಜಿ ತಲೆಮರೆಸಿಕೊಂಡಿದ್ದು, ಸ್ವಾಮಿಜಿ ಬಂಧನದ ಬಳಿಕ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿದೆ. ದೊಡ್ಡವರ ಹೆಸರುಗಳು ಹೊರ ಬರಲಿವೆ ಎಂದು ಚೈತ್ರಾ ಹೇಳಿದ್ದಳು. ಇದೀಗ ಹಾಲಶ್ರೀ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.