ಬೆಂಗಳೂರು, ಸೆ.14: ಮಲೆನಾಡು ಸೇರಿದಂತೆ ಕರ್ನಾಟಕದಲ್ಲಿನ ಭಯೋತ್ಪಾದನಾ ಚಟುವಟಿಕೆ ಕಿಂಗ್ ಪಿನ್ ಅರಾಫತ್ ಅಲಿ ಎಂಬಾತನನ್ನು ಎನ್ಐಎ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವನಾಗಿದ್ದ ಆರೋಪಿ ಅರಾಫತ್ ಅಲಿ, ನೇರವಾಗಿ ಎಲ್ಲಿಯೂ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗದೆ. ಆದರೆ, ಉಗ್ರ ಚಟುವಟಿಕೆಗಳಿಗೆ ವಿದೇಶಗಳಲ್ಲಿಯೇ ಕುಳಿತು ಹಣದ ವ್ಯವಸ್ಥೆ ಮಾಡುತ್ತಿದ್ದ. ಈತ 2020ರಿಂದ ಭಾರತದಿಂದಲೇ ಕರ್ನಾಟಕದ ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಮತೀನ್ ಜೊತೆಗೆ ನಾಪತ್ತೆಯಾಗಿದ್ದ.
ಹೌದು, ಈತ ನಾಪತ್ತೆಯಾದ ಬಳಿಕ ಅಂದಿನಿಂದಲೂ ಕರ್ನಾಟಕದ ಉಗ್ರ ಚಟುವಟಿಕೆಗಳಿಗೆ, ವಿದೇಶಗಳಲ್ಲಿ ಕುಳಿತು ಕ್ರಿಪ್ಟೋ ಕರೆನ್ಸಿ ಮೂಲಕ ಕರ್ನಾಟಕದಲ್ಲಿನ ಉಗ್ರರಿಗೆ ಹಣಕಾಸಿನ ನೆರವು ನೀಡುತ್ತಿದ್ದ. ಕದ್ರಿ ಗೋಡೆ ಬರಹ ಪ್ರಕರಣದ ಪ್ರಮುಖ ಆರೋಪಿಗಳಾದ ಶಾರೀಕ್ ಹಾಗೂ ಮಾಜ್ ಮುನೀರ್ಗೆ ಈತನೇ ಕ್ರಿಪ್ಟೋ ಕರೆನ್ಸಿ ಮೂಲಕ ಹಣಕಾಸು ನೆರವು ನೀಡಿದ್ದ. ಇನ್ನು ಇದೇ ಶಾರಿಕ್ ಹಾಗೂ ಮಾಜ್ ಮುನೀರ್ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದರು. ಆಗಲೂ ಕೂಡ ಇವರಿಗೆ ವಿದೇಶದಿಂದ ಹಣಕಾಸಿನ ನೆರವನ್ನು ಇದೇ ಅರಾಫತ್ ಅಲಿ ಒದಗಿಸಿದ್ದ. ಬಳಿಕ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ನಲ್ಲಿ ಶಾರಿಕ್ ಸಿಕ್ಕಿ ಬಿದ್ದಿದ್ದ.
ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ಐಸಿಸ್ ಸೇರ್ಪಡೆ
ಇನ್ನು ಶಿವಮೊಗ್ಗ ಜಿಲ್ಲೆಯ ನಿವಾಸಿ ಅರಾಫತ್ ಅಲಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ಐಸಿಸ್ ಸೇರ್ಪಡೆಯಾಗಿದ್ದ. ಶಿವಮೊಗ್ಗ ಭಯೋತ್ಪಾದನೆ ಸಂಚು ಪ್ರಕರಣದಲ್ಲಿ ಭಾಗವಾಗಿ, 2020 ರ ಎರಡು ಮಂಗಳೂರು ಗೀಚುಬರಹ ಪ್ರಕರಣದಲ್ಲೂ ಪಾತ್ರ ವಹಿಸಿದ್ದ ಅರಾಫತ್ ಅಲಿ, 2020 ರಿಂದ ತಲೆಮರೆಸಿಕೊಂಡಿದ್ದ. ಇದೀಗ ನೈರೋಬಿಯಿಂದ ದೆಹಲಿಗೆ ಬಂದಿದ್ದ ಇತನನ್ನು, ದೆಹಲಿ ವಿಮಾನ ನಿಲ್ದಾಣದಲ್ಲಿ ಎನ್ಐಎ ಪೊಲೀಸರು ಬಂಧಿಸಿದ್ದಾರೆ.
ಐಸಿಸ್ ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಆರೋಪಿ
ಹೌದು, ಐಸಿಸ್ ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಆರೋಪಿ. ಹಲವು ಭಯೋತ್ಪಾದಕ ಕೃತ್ಯಗಳಿಗೆ ಯೋಜಿಸಿದ್ದ. ಬಳಿಕ ಭಾರತ ವಿರೋಧಿ ಭಯೋತ್ಪಾದಕ ಅಜೆಂಡಾವನ್ನು ಉತ್ತೇಜಿಸಲು ವಿದೇಶದಿಂದ ಕಾರ್ಯಾಚರಣೆ ನಡೆಸುತ್ತಿದ್ದ.